ನನ್ನ ದೇವಳ ಭೇಟಿ ತಡೆಯುವವರು ಅವರ ಜೀವನದ ಬಗ್ಗೆ ಯೋಚಿಸಬೇಕು: ಪ್ರಜ್ಞಾ ಸಿಂಗ್
ಭೋಪಾಲ್, ಮೇ 6: ಚುನಾವಣಾ ಆಯೋಗ ವಿಧಿಸಿದ್ದ 72 ಗಂಟೆಗಳ ಪ್ರಚಾರ ನಿಷೇಧ ಆದೇಶವನ್ನು ಉಲ್ಲಂಘಿಸಿ ಪ್ರಚಾರ ನಡೆಸಿದ್ದಾರೆಂಬ ಆರೋಪ ಹೊತ್ತ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕುರ್ ಆಯೋಗದ ನೋಟಿಸಿಗೆ ನೀಡಿದ ಉತ್ತರದಲ್ಲಿ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.
ಪ್ರಚಾರ ನಿಷೇಧ ವಿಧಿಸಲಾಗಿದ್ದ ಅವಧಿಯಲ್ಲಿ ದೇವಳಗಳಿಗೆ ಭೇಟಿ ನೀಡಿದ್ದ ಸಂದರ್ಭ ಆಕೆಯ ಪರ ಕರಪತ್ರಗಳನ್ನು ಹಂಚಲಾಗಿತ್ತು ಎಂದು ಕಾಂಗ್ರೆಸ್ ದೂರಿದ ನಂತರ ಶುಕ್ರವಾರ ರಾತ್ರಿ ಆಕೆಗೆ ನೋಟಿಸ್ ಜಾರಿಯಾಗಿತ್ತು.
ಈ ನೋಟಿಸಿಗೆ ಠಾಕುರ್ ನೀಡಿದ ಉತ್ತರ ತಮಗೆ ದೊರಕಿದೆಯೆಂದು ಜಿಲ್ಲಾ ಚುನಾವಣಾಧಿಕಾರಿ ಸುದಮ್ ಖಡೆ ಹೇಳಿದ್ದು, ಅದನ್ನು ಮಧ್ಯ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ವಿ ಎಲ್ ಕಾಂತ ರಾವ್ ಅವರಿಗೆ ನೀಡಲಾಗಿದೆಯೆಂದು ಮಾಹಿತಿ ನೀಡಿದ್ದಾರೆ.
ದೇವಳಗಳನ್ನು ಭೇಟಿಯಾಗುವುದು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿರುವ ಪ್ರಜ್ಞಾ ಠಾಕುರ್, ``ನನ್ನನ್ನು ದೇವಸ್ಥಾನಗಳಿಗೆ ಭೇಟಿ ನೀಡದಂತೆ ತಡೆಯಲು ಯತ್ನಿಸುತ್ತಿರುವವರು ಮೊದಲು ತಮ್ಮ ಜೀವನದ ಬಗ್ಗೆ ಯೋಚಿಸಬೇಕು'' ಎಂದಿದ್ದಾರೆ.