ರಾಜೀವ್ ಗಾಂಧಿ ಭಾರತದ ದೊಡ್ಡ ಗುಂಪು ಹಂತಕ ಎಂದ ಅಕಾಲಿದಳ
ಹೊಸದಿಲ್ಲಿ,ಮೇ.6: ರಾಜೀವ್ ಗಾಂಧಿ ಭಾರತದ ಅತ್ಯಂತ ದೊಡ್ಡ ಗುಂಪು ಹಂತಕರಾಗಿದ್ದಾರೆ ಎಂದು ಶಿರೋಮಣಿ ಅಕಾಲಿದಳದ ರಾಷ್ಟ್ರೀಯ ವಕ್ತಾರ ಮಂಜಿಂದರ್ ಸಿಂಗ್ ಸಿರ್ಸಾ ದೂರಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಪ್ರಧಾನಿ ಮೋದಿ ಭ್ರಷ್ಟಾಚಾರಿ ನಂ.1 ಎಂದು ಉಲ್ಲೇಖಿಸಿದ ದಿನಗಳ ನಂತರ ತನ್ನ ಹೇಳಿಕೆ ನೀಡಿರುವ ಸಿರ್ಸಾ, ಒಂದು ಸಮುದಾಯದ ವಿರುದ್ದ ಗುಂಪು ಹತ್ಯೆಯನ್ನು ಆಯೋಜಿಸಿದ ಜಗತ್ತಿನ ಏಕಮಾತ್ರ ಪ್ರಧಾನಿ ರಾಜೀವ್ ಗಾಂಧಿ ಎಂದು ತಿಳಿಸಿದ್ದಾರೆ. ರಾಜೀವ್ ಗಾಂಧಿ ಭ್ರಷ್ಟ ನಂ.1 ಎನ್ನುವ ಪ್ರಧಾನಿ ಮೋದಿಯವರ ಹೇಳಿಕೆ ಸತ್ಯವಾಗಿದೆ. ಅಷ್ಟು ಮಾತ್ರವಲ್ಲ ಅವರು ಭಾರತದ ಅತೀದೊಡ್ಡ ಗುಂಪು ಹಂತಕ ಕೂಡಾ ಆಗಿದ್ದಾರೆ.
ರಾಜೀವ್ ಗಾಂಧಿ ಸಿಖರ ಹತ್ಯಾಕಾಂಡವನ್ನು ಪ್ರೋತ್ಸಾಹಿಸಿದ್ದು ಮಾತ್ರವಲ್ಲ ಅದರಲ್ಲಿ ಭಾಗಿಯಾಗಿದ್ದವರನ್ನು ರಕ್ಷಿಸುವ ಮತ್ತು ಪುರಸ್ಕರಿಸುವ ಕೆಲಸವನ್ನೂ ಮಾಡಿದ್ದಾರೆ ಎಂದು ಸಿರ್ಸಾ ಆರೋಪಿಸಿದ್ದಾರೆ.
ತನ್ನ ಪಕ್ಷ ತಪ್ಪೆಸಗಿದೆ ಎನ್ನುವುದನ್ನು ಯಾಕೆ ಒಪ್ಪುತ್ತಿಲ್ಲ ಮತ್ತು 1984ರ ದಂಗೆಗಳ ಸಂತ್ರಸ್ತರ ಬಗ್ಗೆ ಸಹಾನೂಭೂತಿ ತೋರಲು ಯಾಕೆ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸಿರ್ಸಾ ಆಗ್ರಹಿಸಿದ್ದಾರೆ.