ಬಿಜೆಪಿಯಿಂದ ಪತ್ರಕರ್ತರಿಗೆ ಲಂಚ ಆರೋಪ: ಎಫ್ಐಆರ್ ದಾಖಲಿಸಿದ ಲೇಹ್ ಪೊಲೀಸರು
ಶ್ರೀನಗರ, ಮೇ 9: ಲೋಕಸಭಾ ಚುನಾವಣೆ ಸಂದರ್ಭ ತಮ್ಮ ಪಕ್ಷಕ್ಕೆ ಅನುಕೂಲಕರವಾಗಿ ವರದಿ ಮಾಡಲು ಬಿಜೆಪಿ ಸ್ಥಳೀಯ ಪತ್ರಕರ್ತರಿಗೆ ಲಂಚ ನೀಡಲು ಪ್ರಯತ್ನಿಸಿದ ಎಂಬ ಆರೋಪದ ಕುರಿತು ಲೇಹ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಲೇಹ್ ಪ್ರೆಸ್ ಕ್ಲಬ್ ದಾಖಲಿದ ದೂರಿನ ಹಿನ್ನೆಲೆಯಲ್ಲಿ ಲೇಹ್ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಬುಧವಾರ ಕಾನೂನು ಅಡಿಯಲ್ಲಿ ಈ ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ಅನುಮತಿ ನೀಡಿದ್ದಾರೆ.
ತುರ್ತು ಅರ್ಜಿ ಪರಿಗಣಿಸಲಾಗಿದೆ. ಕಾನೂನಿನ ಅಡಿಯಲ್ಲಿ ಈ ಪ್ರಕರಣದ ತನಿಖೆ ನಡೆಸಲು ಲೇಹ್ ಪೊಲೀಸ್ ಠಾಣೆಯ ಎಸ್ಎಚ್ಒಗೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಬಿಜೆಪಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಲಡಾಕ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಗ್ಝಿನ್ ಸ್ಪಲ್ಬಾರ್ ಕೂಡ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದಾರೆ.
ಅನಂತರ, ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹಾಗೂ ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಲೇಹ್ ಪ್ರೆಸ್ ಕ್ಲಬ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಜಮ್ಮು ಹಾಗೂ ಕಾಶ್ಮೀರ ರಾಜ್ಯಾಧ್ಯಕ್ಷ ರವಿಂದರ್ ರೈನಾ ಹಾಗೂ ಲಡಾಖ್ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಾಂಧಾವಾ ಸಹಿತ ಬಿಜೆಪಿಯ ನಾಯಕರು ಲಡಾಖ್ನ ಮುಖ್ಯ ಪಟ್ಟಣದಲ್ಲಿ ಮೇ 2ರಂದು ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಮಾಧ್ಯಮದವರಿಗೆ ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಐದನೆ ಹಂತದ ಚುನಾವಣೆ ಲಡಾಖ್ ಲೋಕಸಭಾ ಕ್ಷೇತ್ರದಲ್ಲಿ ಮೇ 5ರಂದು ನಡೆಯಲಿದೆ.