ಎನ್ ಡಿಎಯಲ್ಲಿ ನಿತೀಶ್ ಕುಮಾರ್ ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ ?
ಕುತೂಹಲ ಸೃಷ್ಟಿಸಿದ ಜೆಡಿಯು ನಾಯಕನ ಹೇಳಿಕೆ
ಪಾಟ್ನಾ, ಮೇ 9: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದು. ಆದುದರಿಂದ ಅದು ಸರಕಾರ ರಚಿಸಲು ಬಯಸುವುದಾದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬೇಕು ಎಂದು ಜೆಡಿಯು ಎಂಎಲ್ಸಿ ಗುಲಾಮ್ ರಸೂಲ್ ಬಲಿಯಾವಿ ಹೇಳಿದ್ದಾರೆ.
ಜೆಡಿಯುನ ಪ್ರಮುಖ ಮುಸ್ಲಿಂ ನಾಯಕ ಹಾಗೂ ನಿತೀಶ್ ಕುಮಾರ್ ಅವರ ಆಪ್ತ ಎಂದು ಹೇಳಲಾಗುತ್ತಿರುವ ಬಲಿಯಾವಿ, ರಾಜ್ಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಡಿದ ಕೆಲಸದಿಂದ ಎನ್ಡಿಎ ಮತ ಸಿಗಲಿದೆ ಹೊರತು ಪ್ರಧಾನಿ ನರೇಂದ್ರ ಮೋದಿ ಅವರ ಕಾರಣದಿಂದ ಅಲ್ಲ ಎಂದಿದ್ದಾರೆ.
ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿ ಎಂಬ ಚರ್ಚೆಗೆ ಇದು ಮರು ಚಾಲನೆ ನೀಡಿದೆ.
ಲೋಕಸಭಾ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಮರಳಲಿದ್ದಾರೆ. ಆದರೆ, ಬಿಜೆಪಿ ಸ್ಪಷ್ಟ ಬಹುಮತ ಪಡೆಯದ ಸಂದರ್ಭ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಹುದ್ದೆ ಹಕ್ಕುದಾರ ಎಂದು ಬಿಂಬಿಸುವುದು ಉಚಿತವಲ್ಲ ಎಂದು ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಕಳೆದ ಫೆಬ್ರವರಿಯಲ್ಲಿ ಹೇಳಿದ್ದರು.