ರಫೇಲ್ ತೀರ್ಪು ಮರುಪರಿಶೀಲನೆ ಕೋರಿದ್ದ ಅರ್ಜಿಯ ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಮೇ 10: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ಬಗ್ಗೆ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದು ತಾನು 2018ರ ಡಿಸೆಂಬರ್ನಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಆರಂಭಿಸಿದೆ.
ನ್ಯಾಯವಾದಿ ಪ್ರಶಾಂತ್ ಭೂಷಣ್, ಮಾಜಿ ಕೇಂದ್ರ ಸಚಿವರಾದ ಯಶ್ವಂತ್ ಸಿನ್ಹ ಮತ್ತು ಅರುಣ್ ಶೌರಿ ಹಾಗೂ ಇತರರು ಮರುಪರಿಶೀಲನೆ ಕೋರಿಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಪ್ರಶಾಂತ್ ಭೂಷಣ್, ಕೇಂದ್ರ ಸರಕಾರ ನೀಡಿರುವ ತಪ್ಪು ಮಾಹಿತಿಯ ಆಧಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಕಾರಣ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆ ಎಂಬ ವಾದ ಮಂಡಿಸಿದರು. ಅರ್ಜಿದಾರರು ರಫೇಲ್ ಒಪ್ಪಂದದ ವಿರುದ್ಧವಿದ್ದಾರೆ ಎಂಬ ಆಧಾರದಲ್ಲಿ ನ್ಯಾಯಾಲಯದ ಕಾರ್ಯಕಲಾಪ ನಡೆದಿದೆ ಎಂದವರು ಹೇಳಿದರು.
ಒಪ್ಪಂದದ ಷರತ್ತುಗಳಲ್ಲಿ ಒಂದಾಗಿದ್ದ ‘ಭ್ರಷ್ಟಾಚಾರ ವಿರೋಧಿ ಷರತ್ತು’ ಅನ್ನು ಸಂಪುಟ ಸಮಿತಿ ಕೈಬಿಟ್ಟಿದೆ. ಅಲ್ಲದೆ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿಯ ಆಧಾರದಲ್ಲಿ ಒಪ್ಪಂದದ ದರದ ಮಾಹಿತಿಯನ್ನು ಪರಿಷ್ಕರಿಸಲಾಗಿದೆ ಎಂದು ಊಹೆ ಮಾಡಿರುವುದಾಗಿ ಸರಕಾರ ತಿಳಿಸಿದೆ. ಇಂತಹ ಹಲವು ಮಹತ್ವದ ಮಾಹಿತಿಗಳನ್ನು ನ್ಯಾಯಾಲಯದಿಂದ ಮರೆಮಾಚಲಾಗಿದೆ. ಸರಕಾರ ಕಪಟ ನಾಟಕವಾಡಿ ತನ್ನ ಪರವಾದ ತೀರ್ಪು ಪಡೆದಿದೆ ಎಂದು ಭೂಷಣ್ ಹೇಳಿದರು.
ರಫೇಲ್ ಒಪ್ಪಂದದ ಕುರಿತ ಭಾರತೀಯ ಸಮಾಲೋಚನಾ ತಂಡದಲ್ಲಿದ್ದ 7 ಸದಸ್ಯರು ವಿಮಾನದ ದರ ಹೆಚ್ಚಳದ ಬಗ್ಗೆ ಆಕ್ಷೇಪಿಸಿದ್ದರು. ಮಾನದಂಡದ ಬೆಲೆಗಿಂತ 56 ಶೇಕಡಾ ಹೆಚ್ಚುವರಿ ಪಾವತಿಗೆ ಅವರ ವಿರೋಧವಿತ್ತು. ಆದರೆ ಈ ಮಾಹಿತಿಯನ್ನು ಸುಪ್ರೀಂಕೋರ್ಟ್ನಿಂದ ಸರಕಾರ ಬಚ್ಚಿಟ್ಟಿತ್ತು. ಮಹತ್ವದ ಮಾಹಿತಿಯನ್ನು ಬಚ್ಚಿಡುವುದು ವಂಚನೆ ನಡೆಸಿದಂತೆ ಆಗುತ್ತದೆ ಮತ್ತು ಸುಪ್ರೀಂಕೋರ್ಟ್ನ ತೀರ್ಪು ಮರುಪರಿಶೀಲನೆಗೆ ಇದು ಆಧಾರವಾಗಿದೆ . ಅಲ್ಲದೆ ಡಿಸೆಂಬರ್ ತೀರ್ಪಿನ ಬಳಿಕ ಕೆಲವು ಬೆಳವಣಿಗೆಯಾಗಿದೆ. ಫ್ರಾನ್ಸ್ನ ಮಾಜಿ ವಿದೇಶ ಸಚಿವ ಹಾಗೂ ಭಾರತದ ಉದ್ಯಮಿ ಅನಿಲ್ ಅಂಬಾನಿ ಪರಸ್ಪರ ಭೇಟಿಯಾಗಿದ್ದಾರೆ ಎಂಬ ವರದಿಯಿದೆ. ಇಂತಹ ವಿಷಯಗಳು ತೀರ್ಪಿನ ಮರುಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳುತ್ತಿವೆ ಎಂದು ಭೂಷಣ್ ಹೇಳಿದರು.