ಬಿಜೆಪಿಯಿಂದ ಪತ್ರಕರ್ತರಿಗೆ ಲಂಚ ಆರೋಪ; ತನಿಖೆ ಆರಂಭಿಸಿದ ಲೇಹ್ ಪೊಲೀಸರು
ಜಮ್ಮು, ಮೇ 10: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ಒಲವು ಮೂಡಿಸಲು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕೆಲವು ಪತ್ರಕರ್ತರಿಗೆ ಲಂಚ ನೀಡಿದೆ ಎಂಬ ಆರೋಪಕ್ಕೆ ಸಂಬಂಧಿಸಿ ದಾಖಲಿಸಲಾದ ಎಫ್ಐಆರ್ ಹಿನ್ನೆಲೆಯಲ್ಲಿ ಬಿಜೆಪಿಯ ಜಮ್ಮು ಹಾಗೂ ಕಾಶ್ಮೀರದ ಅಧ್ಯಕ್ಷ ರವೀಂದರ್ ರೈನಾ ಹಾಗೂ ಎಂಎಲ್ಸಿ ವಿಕ್ರಮ್ ರಾಂಧಾವಾ ಸಹಿತ ಬಿಜೆಪಿ ನಾಯಕರ ವಿರುದ್ಧ ಲೇಹ್ ಪೊಲೀಸರು ಗುರುವಾರ ತನಿಖೆ ಆರಂಭಿಸಿದ್ದಾರೆ.
ಲಂಚ ಆರೋಪದ ಕುರಿತು ತನಿಖೆ ಆರಂಭಿಸುವಂತೆ ಲೇಹ್ನ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ತ್ಸೆವಾಂಗ್ ಫುಂಟ್ಸೋಗ್ ನಿರ್ದೇಶಿಸಿದ ಬಳಿಕ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದರು. ತುರ್ತು ಅರ್ಜಿಯನ್ನು ಪರಿಗಣಿಸಲಾಗಿದೆ. ಕಾನೂನಿನ ಅಡಿಯಲ್ಲಿ ಈ ಪ್ರಕರಣದ ತನಿಖೆ ನಡೆಸಲು ಲೇಹ್ ಪೊಲೀಸ್ ಠಾಣೆಯ ಎಸ್ಎಚ್ಒಗೆ ಅನುಮತಿ ನೀಡಲಾಗಿದೆ ಎಂದು ದಂಡಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದರು.
ಅದಕ್ಕಿಂತ ಹಿಂದೆ ಲೇಹ್ ಉಪ ಆಯುಕ್ತ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಅನ್ವಿ ಲಾವಾಸ, ಜಮ್ಮು ಹಾಗೂ ಕಾಶ್ಮೀರದ ಲೇಹ್ನಲ್ಲಿ ಪತ್ರಕರ್ತರಿಗೆ ಲಂಚ ನೀಡಲು ಪ್ರಯತ್ನಿಸಿರುವ ಆರೋಪದ ಬಗೆಗಿನ ಪ್ರಾಥಮಿಕ ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಕಾನೂನು ಅಡಿಯ ಸೂಕ್ತ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲು ನಾವು ಪೊಲೀಸರಿಗೆ ತಿಳಿಸಿದ್ದೇವೆ. ನ್ಯಾಯಾಲಯದ ನಿರ್ದೇಶನದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಲು ಸಾಧ್ಯ ಎಂದು ಹೇಳಿದ್ದರು.