ಸಿಖ್ ವಿರೋಧಿ ಗಲಭೆ ಬಗ್ಗೆ ಹೇಳಿಕೆ ನೀಡಿದ ಸ್ಯಾಮ್ ಪಿತ್ರೋಡಾಗೆ ನಾಚಿಕೆಯಾಗಬೇಕು: ರಾಹುಲ್ ಗಾಂಧಿ
ಖನ್ನಾ(ಪಂಜಾಬ್),ಮೇ 13: ಸ್ಯಾಮ್ ಪಿತ್ರೋಡಾ ಅವರ 1984ರ ಸಿಖ್ ವಿರೋಧಿ ದಂಗೆಗಳ ಕುರಿತು ಹೇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕಾಂಗ್ರೆಸ್ ವಿರುದ್ಧ ದಾಳಿಯನ್ನು ಮುಂದುವರಿಸಿದ್ದರೆ,ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು,ಈ ಹೇಳಿಕೆಗಾಗಿ ಪಿತ್ರೋಡಾಗೆ ನಾಚಿಕೆಯಾಗಬೇಕು ಮತ್ತು ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ತರಾಟೆಗೆತ್ತಿಕೊಂಡಿದ್ದಾರೆ.
ಸೋಮವಾರ ಇಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್,ಸಿಖ್ ವಿರೋಧಿ ದಂಗೆಗಳ ಕುರಿತು ಪಿತ್ರೋಡಾ ಅವರ ಹೇಳಿಕೆ ಸಂಪುರ್ಣ ತಪ್ಪಾಗಿದೆ. ಇದಕ್ಕಾಗಿ ಅವರಿಗೆ ನಾಚಿಕೆಯಾಗಬೇಕು.ಅವರು ದೇಶದ ಕ್ಷಮೆ ಯಾಚಿಸಬೇಕು. ನಾನಿದನ್ನು ಬಹಿರಂಗವಾಗಿ ಹೇಳುತಿದ್ದೇನೆ ಮತ್ತು ಅವರಿಗೂ ದೂರವಾಣಿಯಲ್ಲಿ ತಿಳಿಸಿದ್ದೇನೆ ಎಂದರು.
ಈ ಮೊದಲೂ ರಾಹುಲ್ ಪಿತ್ರೋಡಾ ಹೇಳಿಕೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ ಟ್ವೀಟಿಸಿದ್ದರು ಮತ್ತು ಪಕ್ಷವು ಈ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿತ್ತು.
ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಪಿತ್ರೋಡಾ,ಆದದ್ದಾಗಿದೆ,ಏನಿಗ ಎನ್ನುವ ಮೂಲಕ ಸಿಖ್ ವಿರೋಧಿ ದಂಗೆಗಳನ್ನು ಲಘುವಾಗಿ ಪರಿಗಣಿಸಿದ್ದರು.