ಮಳೆಯಾದಾಗ ವಿಮಾನಗಳು ರೇಡಾರ್ನಿಂದ ಮರೆಯಾಗುತ್ತವೆಯೇ: ಮೋದಿಗೆ ಕುಟುಕಿದ ರಾಹುಲ್
ಭೋಪಾಲ, ಮೇ 14: ಬಾಲಕೋಟ್ ಮೇಲಿನ ದಾಳಿಯ ಸಂದರ್ಭ ಭಾರತದ ಯುದ್ಧವಿಮಾನಗಳು ಪಾಕಿಸ್ತಾನ ರೇಡಾರ್ನಿಂದ ತಪ್ಪಿಸಿಕೊಳ್ಳಲು ಮೋಡಗಳು ನೆರವಾಗಬಹುದು ಎಂಬ ಪ್ರಧಾನಿ ಮೋದಿಯ ಸಲಹೆಯ ಬಗ್ಗೆ ಅಣಕವಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಾಗಾದರೆ ಭಾರತದಲ್ಲಿ ಮಳೆಯಾದಾಗ ಎಲ್ಲಾ ವಿಮಾನಗಳೂ ರೇಡಾರ್ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತವೆಯೇ ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಮಂಗಳವಾರ ವಿವಿಧ ಪ್ರಚಾರ ರ್ಯಾಲಿಯಲ್ಲಿ ರಾಹುಲ್ ಪಾಲ್ಗೊಂಡು ಮೋದಿ ವಿರುದ್ಧ ಟೀಕಾಪ್ರಹಾರವನ್ನು ಮುಂದುವರಿಸಿದರು.
ನಟ ಅಕ್ಷಯ್ ಕುಮಾರ್ಗೆ ಪ್ರಧಾನಿ ಮೋದಿ ನೀಡಿರುವ ‘ರಾಜಕೀಯೇತರ ಸಂದರ್ಶನ’ದ ಬಗ್ಗೆಯೂ ರಾಹುಲ್ ಗಾಂಧಿ ಟೀಕಾಸ್ತ್ರ ಎಸೆದಿದ್ದಾರೆ. ಅಕ್ಷಯ್ ಕುಮಾರ್ ಗೆ ನೀಡಿದ ಸಂದರ್ಶನದಲ್ಲಿ ತನ್ನ ಬಾಲ್ಯಕಾಲದ ದಿನಗಳನ್ನು ಸ್ಮರಿಸಿಕೊಂಡಿದ್ದ ಮೋದಿ, ಚಿಕ್ಕಂದಿನಲ್ಲಿ ತನಗೆ ಮಾವಿನ ಹಣ್ಣು ಎಂದರೆ ಬಹಳ ಇಷ್ಟ. ಈಗಲೂ ಅಷ್ಟೇ ಎಂದಿದ್ದರು.
ಈ ಹೇಳಿಕೆಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಮೋದೀಜಿ, ನೀವು ಮಾವಿನ ಹಣ್ಣನ್ನು ತಿನ್ನುವ ರೀತಿಯನ್ನು ನಮಗೆ ತಿಳಿಸಿದ್ದೀರಿ. ಈಗ ಉದ್ಯೋಗವಿಲ್ಲದ ಯುವಜನತೆಗಾಗಿ ಏನು ಮಾಡಿದ್ದೀರಿ ಎಂಬುದನ್ನು ದೇಶಕ್ಕೇ ತಿಳಿಸಿಬಿಡಿ ಎಂದು ಹೇಳಿದರು.