ಮತ್ತೊಮ್ಮೆ ನಮಗೆ ಅಧಿಕಾರ: ಪ್ರಪ್ರಥಮ ಸುದ್ದಿಗೋಷ್ಠಿಯಲ್ಲಿ ಮೋದಿ
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದ ಪ್ರಧಾನಿ!
ಹೊಸದಿಲ್ಲಿ, ಮೇ 17: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸರಕಾರವು ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 5 ವರ್ಷಗಳಲ್ಲೇ ಪ್ರಪ್ರಥಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚುನಾವಣೆಗಾಗಿ ಐಪಿಎಲ್ ಅನ್ನು ದೇಶದ ಹೊರಗೆ ನಡೆಸಿದ ಕಾಲವೊಂದಿತ್ತು. ಆದರೆ ಸಮರ್ಥ ಸರಕಾರವಿದ್ದಾಗ ಚುನಾವಣೆ, ರಮಝಾನ್ ಈಸ್ಟರ್, ಮಕ್ಕಳ ಪರೀಕ್ಷೆ ಮತ್ತಿತರ ವಿಷಯಗಳನ್ನು ಏಕಕಾಲದಲ್ಲಿ ನಡೆಸಬಹುದು” ಎಂದವರು ಹೇಳಿದರು.
ಕೆಲವೊಂದು ವಿಷಯಗಳ ಬಗ್ಗೆ ನಾವು ಹೆಮ್ಮೆಪಟ್ಟುಕೊಳ್ಳಬಹುದು. ನಮ್ಮ ಪ್ರಜಾಪ್ರಭುತ್ವವು ಜಗತ್ತಿನಲ್ಲೇ ಅತ್ಯಂತ ದೊಡ್ಡದು. ದೇಶದ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಮೋದಿ ಹೇಳಿದರು.
ಆದರೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರಧಾನಿ ಯಾವುದೇ ಉತ್ತರ ನೀಡಲಿಲ್ಲ. ತನ್ನೊಂದಿಗೆ ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರಿಗೆ ಅವರು, “ನಾನು ಶಿಸ್ತಿನ ಸಿಪಾಯಿ. ಪಕ್ಷದ ಅಧ್ಯಕ್ಷರೇ ನನಗೆ ಎಲ್ಲವೂ ಆಗಿದ್ದಾರೆ” ಎಂದು ಉತ್ತರಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, “ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಎಲ್ಲಾ ಪ್ರಶ್ನೆಗಳಿಗೂ ಪ್ರಧಾನಿಯೇ ಉತ್ತರಿಸಬೇಕು ಎಂದೇನಿಲ್ಲ” ಎಂದರು.