ವಿಂಗ್ ಕಮಾಂಡರ್ ಅಭಿನಂದನ್ ಪರಾಕ್ರಮವನ್ನು ಶಾಲಾ ಪಠ್ಯದಲ್ಲಿ ಸೇರಿಸಿದ ಕಾಂಗ್ರೆಸ್ ಸರಕಾರ
ಜೈಪುರ್, ಮೇ 17: ರಾಜಸ್ಥಾನ ಸರಕಾರ ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಾಲಕೋಟ್ ವಾಯುದಾಳಿ ಹಾಗೂ ಪಾಕಿಸ್ತಾನದ ವಶದಲ್ಲಿದ್ದು ನಂತರ ಬಿಡುಗಡೆಗೊಂಡ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಶೌರ್ಯಕ್ಕೆ ಸಂಬಂಧಿಸಿದ ಪಾಠವನ್ನು ಸೇರಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಪಠ್ಯಪುಸ್ತಕ ಪರಿಚಯಗೊಳ್ಳಲಿದೆ.
“ರಾಷ್ಟ್ರೀಯ ಸುರಕ್ಷ ಏವಂ ಶೌರ್ಯ ಪರಂಪರ'' ಎಂಬ ಅಧ್ಯಾಯದಲ್ಲಿ ಈ ವಾಯುದಾಳಿ ವಿಚಾರವನ್ನು ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿ ಸೇರಿಸಿದ್ದು ಅದರಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಪಾತ್ರವನ್ನೂ ಉಲ್ಲೇಖಿಸಲಾಗಿದೆ.
“ಪುಲ್ವಾಮದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರ ದಾಳಿಯ ನಂತರ ಭಾರತೀಯ ವಾಯು ಸೇನೆ ಫೆಬ್ರವರಿ 26, 2019ರಂದು ತನ್ನ 12 ಮಿರಾಜ್-2000 ಯುದ್ಧ ವಿಮಾನಗಳ ಮೂಲಕ ಬಾಲಕೋಟ್ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಮರುದಿನ ಪಾಕಿಸ್ತಾನದ ಯುದ್ಧ ವಿಮಾನ ಎಫ್-16 ಭಾರತೀಯ ವಾಯು ಪ್ರದೇಶ ಪ್ರವೇಶಿಸಿ ಮಿಲಿಟರಿ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಭಾರತೀಯ ವಾಯುಪಡೆ ತನ್ನ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ತಕ್ಕ ಪ್ರತ್ಯುತ್ತರ ನೀಡುವ ಜವಾಬ್ದಾರಿ ವಹಿಸಿತ್ತು. ಮಿಗ್-21 ವಿಮಾನ ಹಾರಾಟ ನಡೆಸಿದ ಅವರು ತಾವು ಹಾರಾಟ ನಡೆಸುತ್ತಿದ್ದ ಜೆಟ್ ಗಿಂತಲೂ ಉತ್ತಮವಾಗಿದ್ದ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು'' ಎಂದು ಪಠ್ಯದಲ್ಲಿ ಬರೆಯಲಾಗಿದೆ.