ಮೋದಿಯನ್ನು ವಿಭಜಕ ಎಂದು ಬಿಂಬಿಸಿದ ಟೈಮ್ ಮ್ಯಾಗಝೀನ್: ಬಿಜೆಪಿ ಖಂಡನೆ
ಹೈದರಾಬಾದ್,ಮೇ.17: ಪ್ರಧಾನಿ ಮೋದಿಯನ್ನು ಪ್ರಧಾನ ವಿಭಜಕ ಎಂದು ವ್ಯಾಖ್ಯಾನಿಸಿದ್ದ ಟೈಮ್ ಮ್ಯಾಗಝೀನ್ ಲೇಖನವನ್ನು ತೀವ್ರವಾಗಿ ಖಂಡಿಸಿರುವ ತೆಲಂಗಾಣದ ಬಿಜೆಪಿ ನಾಯಕರು, ಪ್ರಧಾನಿ ಮೋದಿ ಓರ್ವ ಏಕತಾವಾದಿ ಮತ್ತು ಸೌಹಾರ್ದವಾದಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತಿಳಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಣಾಳಿಕೆ ಉಪಸಮಿತಿ ಸದಸ್ಯೆ ಕರುಣಾ ಗೋಪಾಲ್, ಈ ಲೇಖನ ಬರೆದಿರುವ ಲೇಖಕರನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಲೇಖನದಲ್ಲಿ ಸತ್ಯವನ್ನು ತಿರುಚಲಾಗಿದೆ ಮತ್ತು ಭಾರತದ ಬಗ್ಗೆ ಮತ್ತು ಅದರ ಅಭಿವೃದ್ಧಿ ಮಾನದಂಡ ಮತ್ತು ಪ್ರಧಾನಿ ಮೋದಿಯವರ ಯೋಚನೆ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದ ಕರುಣಾ ಗೋಪಾಲ್, ಮ್ಯಾಗಝೀನ್ ಮತ್ತು ಲೇಖಕರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೋಪಾಲ್ ತಿಳಿಸಿದ್ದಾರೆ.
ಮೋದಿ ಸರಕಾರ ಜನಧನ ಯೋಜನೆ, ಉಜ್ವಲ, ಮುದ್ರಾ ಮತ್ತು ಸ್ವಚ್ಛ ಭಾರತ ಯೋಜನೆಗಳು ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಳಿದ ವರ್ಗ ಹೀಗೆ ಸಮಾಜದ ಎಲ್ಲ ವಿಭಾಗಗಳ ಜನರಿಗೂ ಲಾಭ ನೀಡಿದೆ. ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವಗಳಲ್ಲಿ ಒಂದಾಗಿರುವ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯನ್ನು ಓರ್ವ ಮತಾಂಧ ಎಂದು ಕರೆಯಲು ಈ ಲೇಖಕನಿಗೆ ಎಷ್ಟು ಧೈರ್ಯ ಎಂದು ಕರುಣಾ ಕಿಡಿಕಾರಿದ್ದಾರೆ.