ಪ.ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: ಕಚ್ಚಾ ಬಾಂಬ್ ಸ್ಫೋಟ
ಕೋಲ್ಕತಾ, ಮೇ 19: ಪಶ್ಚಿಮಬಂಗಾಳದಲ್ಲಿ ರವಿವಾರ ನಡೆದ ಏಳನೇ ಹಾಗೂ ಕೊನೆಯ ಹಂತದ ಲೋಕಸಭಾ ಚುನಾವಣೆಯ ವೇಳೆಯೂ ಹಿಂಸಾಚಾರ ಘಟನೆ ನಡೆದಿದ್ದು, ಅಲ್ಲಲ್ಲಿ, ಬಿಜೆಪಿ, ಟಿಎಂಸಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಮಥುರಾಪುರ ಲೋಕಸಭಾ ಚುನಾವಣಾ ಕ್ಷೇತ್ರ ವ್ಯಾಪ್ತಿಯ ರಾದಿಗೈ ವಿಧಾನಸಭಾ ಕ್ಷೇತ್ರದಲ್ಲಿ ಕಚ್ಚಾ ಬಾಂಬ್ಸ್ಫೋಟ ಸಂಭವಿಸಿದ್ದು, ಹಿಂಸಾಚಾರ ಭುಗಿಲೆದ್ದಿದೆ.
ಹಲವು ಕಡೆ ಮತಗಟ್ಟೆಗಳಲ್ಲಿ ಇವಿಎಂ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿದೆ. ಇನ್ನು ಕೆಲವು ಕಡೆ ವಿವಿಪ್ಯಾಟ್ ಕೆಲಸ ಮಾಡಿಲ್ಲ ಎಂದು ವರದಿಯಾಗಿದೆ. ಕೋಲ್ಕತಾ ಸೇರಿದಂತೆ ಹಲವು ಕಡೆ ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಅಧಿಕಾರಿಗಳು ತನ್ನನ್ನು ಥಳಿಸಿ ಹೊರಹಾಕಿದ್ದಾರೆ ಎಂದು ಸಿಪಿಐ ಅಭ್ಯರ್ಥಿ ಘೋಷ್ ಆರೋಪಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಕೂಡ ತಮಗೆ ಚುನಾವಣಾ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಅರೋಪಿಸಿದ್ದಾರೆ.
ಕಳೆದ ರಾತ್ರಿ ರಾಜರ್ಹಟ್ನಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಬಾಸಿರ್ಹತ್ನಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಜಾದವ್ಪುರ ಬಿಜೆಪಿ ಅಭ್ಯರ್ಥಿ ಅನುಪಮ್ ಹಝ್ರಾ ಅವರ ಕಾರು ಧ್ವಂಸಗೊಳಿಸಲಾಗಿದೆ.