ವಿರೋಧ ಪಕ್ಷಗಳ ಗದ್ದಲದ ನಡುವೆಯೂ, ಚುನಾವಣಾ ಆಯೋಗಕ್ಕೆ ಶಹಬ್ಬಾಸ್ ನೀಡಿದ್ದು ಯಾರು ಗೊತ್ತೇ?
ಹೊಸದಿಲ್ಲಿ, ಮೇ 21: ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಆಯೋಗ ಪಕ್ಷಪಾತ ಎಸಗಿದೆ ಎಂದು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿರುವ ನಡುವೆಯೇ, ರವಿವಾರ ಮುಕ್ತಾಯವಾದ ಏಳು ಹಂತಗಳ ಮತದಾನ ಪರಿಪೂರ್ಣವಾಗಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚುನಾವಣಾ ಆಯೋಗಕ್ಕೆ ಶಹಬ್ಬಾಸ್ ನೀಡಿದ್ದಾರೆ. ಮಾಜಿ ರಾಷ್ಟ್ರಪತಿಯವರ ಈ ನಿಲುವು ಇತರ ವಿರೋಧ ಪಕ್ಷಗಳು ಹಾಗೂ ಕಾಂಗ್ರೆಸ್ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿದೆ.
"ಸಂಸ್ಥೆಗಳನ್ನು ನಾವು ಬಲಗೊಳಿಸಬೇಕಿದ್ದರೆ, ದೇಶದಲ್ಲಿ ಈ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು; ಪ್ರಜಾಪ್ರಭುತ್ವ ಯಶಸ್ವಿಯಾಗಿದ್ದರೆ, ಮೊಟ್ಟಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರಿಂದ ಹಿಡಿದು ಇದುವರೆಗಿನ ಎಲ್ಲ ಆಯುಕ್ತರು ಸಮರ್ಪಕವಾಗಿ ಚುನಾವಣೆಗಳನ್ನು ನಡೆಸಿದ್ದರ ಫಲ. ಎಲ್ಲರನ್ನೂ ಕಾರ್ಯಾಂಗ ನೇಮಕ ಮಾಡಿದ್ದು, ತಮ್ಮ ಕಾರ್ಯವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅವರನ್ನು ಟೀಕಿಸಲಾಗದು; ಚುನಾವಣೆ ಅಚ್ಚುಗಟ್ಟಾಗಿ ನಡದಿದೆ" ಎಂದು ಎನ್ಡಿಟಿವಿ ಸಂಪಾದಕೀಯ ನಿರ್ದೇಶಕಿ ಸೋನಿಯಾ ಸಿಂಗ್ ಅವರ "ಡಿಫೈನ್ ಇಂಡಿಯಾ ಥ್ರೂ ದೆಯರ್ ಐಸ್" ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖರ್ಜಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮುಖರ್ಜಿ, 2012ರಲ್ಲಿ ರಾಷ್ಟ್ರಪತಿಯಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ದೇಶ ಪಾಲ್ಗೊಂಡ ಬಗ್ಗೆ ಕೂಡಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡ 67.3ರಷ್ಟು ಮಂದಿ ಭಾಗಿಯಾಗಿದ್ದಾರೆ. ಅದು ಶೇಕಡ ಮೂರನೇ ಎರಡಕ್ಕಿಂತಲೂ ಅಧಿಕ. ಬಹಳ ವರ್ಷಗಳ ಬಳಿಕ ನಾನು ಸಾಮಾನ್ಯ ನಾಗರಿಕ ಪ್ರಣವ್ ಮುಖರ್ಜಿಯಾಗಿ ನನ್ನ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ" ಎಂದು ಹೇಳಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಆಯೋಗವು ಬಿಜೆಪಿ ಪರ ಪಕ್ಷಪಾತ ಧೋರಣೆ ಅನುಸರಿಸಿದೆ ಎಂದು ಆಪಾದಿಸಿದ್ದರು. "ಚುನಾವಣಾ ಬಾಂಡ್, ಇವಿಎಂಗಳಿಂದ ಹಿಡಿದು ಚುನಾವಣಾ ವೇಳಾಪಟ್ಟಿ ಮಾರ್ಪಾಡಿನವರೆಗೆ, ನಮೋ ಟಿವಿ, ಸೇನೆ ಮತ್ತು ಕೇದಾರನಾಥ ನಾಟಕ ವಿಚಾರದಲ್ಲಿ ಕೂಡಾ ಆಯೋಗ ಪಕ್ಷಪಾತದ ಧೋರಣೆ ಅನುಸರಿಸಿದೆ. ಚುನಾವಣಾ ಆಯೋಗ ಮೋದಿ ಹಾಗೂ ಅವರ ಗ್ಯಾಂಗ್ಗೆ ಶರಣಾಗಿದೆ. ಚುನಾವಣಾ ಆಯೋಗದ ಬಗ್ಗೆ ಭಯ ಹಾಗೂ ಗೌರವ ಇರಬೇಕು. ಇನ್ನು ಮುಂದೆ ಇಲ್ಲ" ಎಂದು ರಾಹುಲ್ ಕಿಡಿ ಕಾರಿದ್ದರು.