ಬಿಜೆಪಿ, ಮಿತ್ರ ಪಕ್ಷಗಳು ಮತಲೂಟಿಗೆ ಪ್ರಯತ್ನಿಸಿದರೆ ರಕ್ತಪಾತವಾಗುತ್ತದೆ: ಉಪೇಂದ್ರ ಕುಶ್ವಾಹ ಎಚ್ಚರಿಕೆ
ಪಟ್ನಾ: ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಮತಯಂತ್ರಗಳನ್ನು ತಿರುಚುವ ಮೂಲಕ ಮತಲೂಟಿಗೆ ಪ್ರಯತ್ನಿಸಿದಲ್ಲಿ, ಹಿಂಸಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಲೋಕಸಮತಾ ಪಕ್ಷ (ಆರ್ಎಲ್ಎಸ್ಪಿ) ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಎಚ್ಚರಿಕೆ ನೀಡಿದ್ದಾರೆ.
ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಕುಶ್ವಾಹ ಇದೀಗ ವಿರೋಧ ಪಕ್ಷಗಳ ಮಹಾಮೈತ್ರಿಕೂಟದಲ್ಲಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಹರ್ಯಾಣದಲ್ಲಿ ಭದ್ರತಾ ಕೊಠಡಿಗಳಿಂದ ಅಪಹರಿಸಲು ಕೆಲ ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕುಶ್ವಾಹ ಈ ಎಚ್ಚರಿಕೆ ನೀಡಿದರು.
ಈ ಕುರಿತಂತೆ ಹಲವು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿರೋಧ ಪಕ್ಷಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡಾ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
"ವಾಹನಗಳಲ್ಲಿ ಇವಿಎಂ ಒಯ್ಯಲಾಗುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಆದರೆ ಅಧಿಕಾರಿಗಳಿಂದ ಇದಕ್ಕೆ ಉತ್ತರ ಇಲ್ಲ. ಇಂಥ ಘಟನೆಗಳಿಂದ ಜನರಿಗೆ ತೊಂದರೆಯ ಅನುಭವ ಆಗುತ್ತಿದೆ. ಜನ ಅಥವಾ ಮಹಾಘಟಬಂಧನ ಮುಖಂಡರು ಇದನ್ನು ನೋಡುತ್ತಾ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.
ಒಬ್ಬನ ಮತವನ್ನು ಸುರಕ್ಷಿತವಾಗಿ ಇಡುವುದು ಕೂಡಾ ಸ್ವಯಂರಕ್ಷಣೆಯಷ್ಟೇ ಮಹತ್ವದ್ದು ಎಂದು ಅವರು ಅಭಿಪ್ರಾಯಪಟ್ಟರು. ಮತಲೂಟಿಗೆ ಎನ್ಡಿಎ ಪ್ರಯತ್ನಿಸಿದಲ್ಲಿ, ಅದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತದೆ ಹಾಗೂ ಬೀದಿಗಳಲ್ಲಿ ರಕ್ತ ಹರಿಯಲು ಕಾರಣವಾಗುತ್ತದೆ ಎಂದು ಕುಶ್ವಾಹ ಹೇಳಿಕೆ ನೀಡಿದ್ದಾಗಿ ಪಿಟಿಐ ವರದಿ ಮಾಡಿದೆ.
ಮತಗಟ್ಟೆ ನಿರ್ಗಮನ ಸಮೀಕ್ಷೆಗಳ ವರದಿಯನ್ನು ಅಲ್ಲಗಳೆದ ಅವರು, ಇದು ವಿರೋಧ ಪಕ್ಷಗಳ ಮುಖಂಡರ ನೈತಿಕ ಸ್ಥೈರ್ಯ ಕುಂದಿಸಲು ಎನ್ಡಿಎ ಹೂಡಿದ ತಂತ್ರ ಎಂದು ಬಣ್ಣಿಸಿದರು.