ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ನಿರಾಶದಾಯಕ ನಿರ್ವಹಣೆ: ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ ರಾಜ್ ಬಬ್ಬರ್
ಲಕ್ನೋ, ಮೇ 24: ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನಿರಾಶಾದಾಯಕ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ರಾಜ್ ಬಬ್ಬರ್ ತನ್ನ ರಾಜೀನಾಮೆಯನ್ನು ರಾಹುಲ್ ಗಾಂಧಿಗೆ ರವಾನಿಸಿದ್ದಾರೆ.
ಬಬ್ಬರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ವಕ್ತಾರ ರಾಜೀವ್ ಬಕ್ಷಿ ಲಕ್ನೋದಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಪೂರ್ಣಗೊಂಡಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರಾಶಾದಾಯಕ ನಿರ್ವಹಣೆ ತೋರಿರುವುದರ ಹೊಣೆ ಹೊತ್ತು ಅವರು ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂದು ಭಕ್ಷಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ನಿರಾಶೆಗೆ ತಳ್ಳಿದೆ. ನನ್ನ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಲ್ಲ ಎಂಬ ಅಪರಾಧ ಭಾವನೆ ನನ್ನನ್ನು ಕಾಡುತ್ತಿದೆ ಎಂದು ರಾಜ್ ಬಬ್ಬರ್ ಶುಕ್ರವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ನಾನು ಹಿರಿಯ ನಾಯಕರನ್ನು ಭೇಟಿಯಾಗಿದ್ದೇನೆ ಹಾಗೂ ನನ್ನ ನಿಲುವನ್ನು ವ್ಯಕ್ತಪಡಿಸಿದ್ದೇನೆ. ಜನರ ವಿಶ್ವಾಸವನ್ನು ಗೆದ್ದ ವಿಜಯಿಗಳಿಗೆ ಅಭಿನಂದನೆ ಎಂದು ಅವರು ಹೇಳಿದ್ದಾರೆ.