ಕಾಂಗ್ರೆಸ್ ಅನ್ನು ಮೇಲೆತ್ತಲು ರಾಹುಲ್ ಉತ್ತಮ ವ್ಯಕ್ತಿ: ಶಶಿ ತರೂರ್
ಹೊಸದಿಲ್ಲಿ, ಮೇ 28: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿರುವುದರಿಂದ ಸಂಕಷ್ಟದಲ್ಲಿ ಸಿಲುಕಿರುವ ಕಾಂಗ್ರೆಸ್ ಅನ್ನು ಮೇಲೆತ್ತಲು ರಾಹುಲ್ ಗಾಂಧಿ ಉತ್ತಮ ವ್ಯಕ್ತಿ ಎಂದು ಶಶಿ ತರೂರ್ ಹೇಳಿದ್ದಾರೆ. ಸೋಲನ್ನು ನೆನಪಿಸುತ್ತಾ ಕುಳಿತುಕೊಳ್ಳಲು ಇದು ಸಮಯವಲ್ಲ. ಪಕ್ಷ ಎಚ್ಚೆತ್ತುಕೊಂಡು ಮುಂಬರುವ ಚುನಾವಣೆಗೆ ಸಿದ್ಧವಾಗಬೇಕು ಎಂದು ತರೂರ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಪಡೆದುಕೊಂಡ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ರಾಹುಲ್ ಗಾಂಧಿ ಬದಲಾಗದೇ ಇರುವುದರಿಂದ ಪಕ್ಷ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬಿಜೆಪಿಗೆ ಉತ್ತರದಾಯಿ ರಾಷ್ಟ್ರೀಯ ಪರ್ಯಾಯವಾಗಿ ಈಗಲೂ ಇರುವ ಏಕೈಕ ಪಕ್ಷ ಕಾಂಗ್ರೆಸ್. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೆ ಮುನ್ನೆಲೆಗೆ ಬರುವ ಭರವಸೆ ಇದೆ ಎಂದು ಅವರು ಹೇಳಿದರು.
ಸ್ವಾತಂತ್ರದ ಬಳಿಕ ಪಕ್ಷಕ್ಕೆ ರೂಪು ಹಾಗೂ ಸಲಹೆ ನೀಡುವಲ್ಲಿ ಕೊಡುಗೆ ನೀಡಿದ ಆಧಾರದಲ್ಲಿ ಪಕ್ಷದಲ್ಲಿರುವ ಗಾಂಧಿ-ನೆಹರೂ ಕುಟಂಬದ ಪ್ರಭಾವ-ಗೌರವ ಮುಂದುವರಿಯಲಿದೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿ ರಾಜೀನಾಮೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಶಿ ತರೂರ್, ಪಕ್ಷದ ಸೋಲಿನ ಹೊಣೆಯನ್ನು ರಾಹುಲ್ ಗಾಂಧಿ ಅವರು ಧೈರ್ಯವಾಗಿ ಹೊತ್ತುಕೊಂಡಿದ್ದಾರೆ. ಸೋಲಿಗೆ ನಾವೆಲ್ಲರೂ ಜವಾಬ್ದಾರರು. ಪಕ್ಷವನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ನಮ್ಮೆಲ್ಲರಿಗೆ ಇದೆ ಎಂದರು.