ಭ್ರಷ್ಟಾಚಾರ ಪ್ರಕರಣ: ರಾಬರ್ಟ್ ವಾದ್ರಾಗೆ ಇ.ಡಿ. ನೋಟಿಸ್
ಹೊಸದಿಲ್ಲಿ, ಮೇ 29: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ತನ್ನ ಹೊಸದಿಲ್ಲಿಯಲ್ಲಿರುವ ಕಚೇರಿಯಲ್ಲಿ ಗುರುವಾರ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಉದ್ಯಮಿ ರಾಬರ್ಟ್ ವಾದ್ರಾ ಅವರಿಗೆ ನೋಟಿಸು ಜಾರಿ ಮಾಡಿದೆ.
ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ರಾಬರ್ಟ್ ವಾದ್ರಾ ಅವರಿಗೆ ನೀಡಿದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಲಂಡನ್ನ ಬ್ರಾನ್ಸ್ಟನ್ ಸ್ಕ್ವಾರ್ನಲ್ಲಿ 1.9 ದಶಲಕ್ಷ ಪೌಂಡ್ನ ಸೊತ್ತು ಖರೀದಿಸಲು ಹಣ ವಂಚನೆ ನಡೆಸಿದ ಆರೋಪವನ್ನು ರಾಬರ್ಟ್ ವಾದ್ರಾ ಎದುರಿಸುತ್ತಿದ್ದಾರೆ.
ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿಗೆ ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ವಾದ್ರಾ ಅವರ ಪ್ರತಿಕ್ರಿಯೆ ಕೋರಿತ್ತು. ದಿಲ್ಲಿ ಉಚ್ಚ ನ್ಯಾಯಾಲಯ ವಾದ್ರಾ ಅವರಿಗೆ ನೋಟಿಸು ಜಾರಿ ಮಾಡಿತ್ತು ಹಾಗೂ ಜುಲೈ 17ರ ಒಳಗೆ ಜಾರಿ ನಿರ್ದೇಶನಾಲಯದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.