ಮೋದಿ ಸರಕಾರದಲ್ಲಿ ರಾಜ್ಯದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ
ಹೊಸದಿಲ್ಲಿ, ಮೇ 30: ಕೇಂದ್ರ ಸಚಿವ ಸಂಪುಟದಲ್ಲಿ ಮಾಜಿ ಸಚಿವರಾದ ಡಿ.ವಿ.ಸದಾನಂದ ಗೌಡ ಮತ್ತು ನಿರ್ಮಲಾ ಸೀತಾರಾಮನ್, ಧಾರವಾಡದ ಸಂಸದ ಪ್ರಹ್ಲಾದ ಜೋಶಿ ಮತ್ತು ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ಸಚಿವ ಸ್ಥಾನ ಖಚಿತವಾಗಿದೆ.
ಡಿ.ವಿ.ಸದಾನಂದ ಗೌಡ,ನಿರ್ಮಲಾ ಸೀತಾರಾಮನ್ , ಪ್ರಹ್ಲಾದ ಜೋಶಿ ಮತ್ತು ಸುರೇಶ್ ಅಂಗಡಿ ರಾತ್ರಿ 7 ಗಂಟೆಗೆ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೊದಲ ಬಾರಿ ರಾಜ್ಯದ ಮೂವರು ಸಂಸದರು ಮತ್ತು ರಾಜ್ಯ ಸಭಾ ಸದಸ್ಯರೊಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವಂತಾಗಿದೆ.
ಡಿ.ವಿ.ಸದಾನಂದ ಗೌಡ,ನಿರ್ಮಲಾ ಸೀತಾರಾಮನ್ , ಪ್ರಹ್ಲಾದ ಜೋಶಿ ಮತ್ತು ಸುರೇಶ್ ಅಂಗಡಿ ಅವರಿಗೆ ಪ್ರಮಾಣ ವಚನ ಉದ್ದೇಶಕ್ಕಾಗಿ ಸಂಜೆ 5 ಗಂಟೆಗೆ ಪ್ರಧಾನಿ ನಿವಾಸಕ್ಕೆ ಆಗಮಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಬಿಜೆಪಿಯ ಒಟ್ಟು 25 ಸಂಸದರ ಪೈಕಿ ಸದಾನಂದ ಗೌಡ , ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ ಮೊದಲ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೂ ಸಚಿವ ಸ್ಥಾನ ದೊರೆಯುವುದರೊಂದಿಗೆ ರಾಜ್ಯದಿಂದ ಒಟ್ಟು ನಾಲ್ವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಖಚಿತವಾಗಿದೆ.