ಬಾರಾಬಂಕಿ ವಿಷ ಮದ್ಯ ಸೇವನೆ ಪ್ರಕರಣ: ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ ಸಾಧ್ಯತೆ
ಲಕ್ನೋ, ಮೇ 31: ಮೇ 27ರಂದು ಇತರ ನಾಲ್ವರು ಮೃತಪಟ್ಟ ಪ್ರಕರಣದ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿರುವುದರಿಂದ ಬಾರಬಂಕಿಯಲ್ಲಿ ವಿಷಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ರಾಮನಗರದಲ್ಲಿ ಸೋಮವಾರ ಮೃತಪಟ್ಟ ನಾಲ್ವರ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಅದೇ ನೋಂದಾಯಿತ ಸಾರಾಯಿ ಅಂಗಡಿಯಿಂದ ವಿಷ ಮದ್ಯ ಸೇವಿಸಿದ ಬಳಿಕ ನಾಲ್ವರು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ ಎಂದು ಬಾರಾಬಂಕಿಯ ಜಿಲ್ಲಾ ದಂಡಾಧಿಕಾರಿ ಉದಯ್ ಭಾನು ತ್ರಿಪಾಠಿ ಗುರುವಾರ ತಿಳಿಸಿದ್ದಾರೆ. ನಾಲ್ವರ ಸಾವಿನ ಖಚಿತ ಕಾರಣದ ಬಗ್ಗೆ ತನಿಖೆ ನಡೆಸಲು ನಾವು ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಾಲ್ವರಲ್ಲಿ ರಾಜೇಂದ್ರ ಹಾಗೂ ವಿನಯ್ ಪ್ರತಾಪ್ ಅವರ ಮೃತದೇಹವನ್ನು ಅಧಿಕಾರಿಗಳಿಗೆ ಮಾಹಿತಿ ನೀಡದೆ ದಹನ ಮಾಡಲಾಗಿದೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವ ವೈದ್ಯರು ಶೀಘ್ರದಲ್ಲಿ ವರದಿ ಸಲ್ಲಿಸಲಿದ್ದಾರೆ ಎಂದು ತ್ರಿಪಾಠಿ ತಿಳಿಸಿದ್ದಾರೆ.