ಅಂಗಡಿ ಮಾಲಕರು, ಚಿಲ್ಲರೆ ವ್ಯಾಪಾರಿಗಳಿಗೆ ಮಾಸಿಕ 3,000ರೂ. ಪಿಂಚಣಿ ಘೋಷಿಸಿದ ಮೋದಿ ಸರಕಾರ
ಹೊಸದಿಲ್ಲಿ, ಮೇ.31: ಅಂಗಡಿ ಮಾಲಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಸ್ವದ್ಯೋಗ ಹೊಂದಿರುವ ವ್ಯಕ್ತಿಗಳಿಗೆ 60 ವರ್ಷಗಳ ನಂತರ ಮಾಸಿಕ 3,000ರೂ. ಪಿಂಚಣಿ ನೀಡುವ ಹೊಸ ಯೋಜನೆಯನ್ನು ಮೋದಿ ಸರಕಾರ ಜಾರಿಗೆ ತಂದಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ಈ ನಿರ್ಧಾರದಿಂದ ಮೂರು ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿ ಮಾಲಕರು ಲಾಭಪಡೆಯಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆಗೆ ಐದು ಕೋಟಿ ವ್ಯಾಪಾರಿಗಳು ಸೇರುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ತಿಳಿಸಿದ್ದಾರೆ. ಜಿಎಸ್ಟಿ ವ್ಯವಹಾರ 1.5 ಕೋಟಿ ರೂ.ಗಿಂತ ಕಡಿಮೆಯಿರುವ 18ರಿಂದ 40 ವರ್ಷ ಪ್ರಾಯದ ಒಳಗಿನ ಅಂಗಡಿ ಮಾಲಕರು, ಸ್ವ ಉದ್ಯೋಗ ಹೊಂದಿರುವವರು ಮತ್ತು ಚಿಲ್ಲರೆ ವ್ಯಾಪಾರಿಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಸಕ್ತಿಯುಳ್ಳವರು ದೇಶಾದ್ಯಂತವಿರುವ 3.25 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಹೆಸರು ನೋಂದಾಯಿಸಬಹುದಾಗಿದೆ. ಸರಕಾರ ಚಂದಾದಾರರ ಖಾತೆಗೆ ಸಮಾನ ಮೊತ್ತವನ್ನು ಹಾಕಲಿದೆ ಎಂದು ಸರಕಾರಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.