ಮಾಲೆಗಾಂವ್ ಸ್ಫೋಟ ಪ್ರಕರಣ : ಪ್ರಜ್ಞಾ ಠಾಕೂರ್ ಅಪೀಲು ತಿರಸ್ಕರಿಸಿದ ನ್ಯಾಯಾಲಯ
ವಿಚಾರಣೆಗೆ ಹಾಜರಾಗುವಂತೆ ಆದೇಶ
ಹೊಸದಿಲ್ಲಿ : ಸಂಸತ್ತಿನಲ್ಲಿ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿರುವುದರಿಂದ ಮಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಗೆ ಎನ್ಐಎ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ಜೂನ್ 3ರಿಂದ 7ರ ತನಕ ವಿನಾಯಿತಿ ನೀಡಬೇಕೆಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕುರ್ ಮಾಡಿರುವ ಅಪೀಲನ್ನು ವಿಶೇಷ ಎನ್ಐಎ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಈ ವಾರ ನಡೆಯಲಿರುವ ವಿಚಾರಣೆ ವೇಳೆ 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ಞಾ ಹಾಜರಿರಬೇಕೆಂದು ನ್ಯಾಯಾಲಯ ಆದೇಶಿಸಿದೆ. ವಾರಕ್ಕೆ ಕನಿಷ್ಠ ಒಂದು ಬಾರಿ ಹಾಜರಾಗಬೇಕೆಂದು ನ್ಯಾಯಾಲಯ ಠಾಕುರ್ ಗೆ ಸೂಚಿಸಿದೆ.
ಪ್ರಕರಣದ ಎಲ್ಲಾ ಆರೋಪಿಗಳೂ ವಿಚಾರಣೆ ವೇಳೆ ಹಾಜರಿರಬೇಕೆಂದು ನ್ಯಾಯಾಲಯ ಈ ಹಿಂದೆಯೇ ಸೂಚಿಸಿದ್ದರೂ ಸೋಮವಾರ ಪ್ರಜ್ಞಾ ಠಾಕುರ್ ಅವರ ವಕೀಲರು ವಿನಾಯಿತಿಗೆ ಮನವಿ ಮಾಡಿದ್ದರು. ಆದರೆ ಜೂನ್ 7ರ ತನಕ ಸಂಸತ್ತಿನಲ್ಲಿ ಏನೂ ಪ್ರಮುಖವಾದದ್ದು ನಡೆಯುವು ದಿಲ್ಲವಾದುದರಿಂದ ಪ್ರಜ್ಞಾ ಈ ವಾರ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಲಾಗಿದೆ. ಮುಂದಿನ ವಿಚಾರಣಾ ದಿನದಂದು ಹಾಜರಾಗದೇ ಇದ್ದರೆ ನ್ಯಾಯಾಲಯ ಸೂಕ್ತ ಆದೇಶ ಹೊರಡಿಸುವುದು ಎಂದೂ ನ್ಯಾಯಾಧೀಶರು ಹೇಳಿದ್ದಾರೆ.
ಮೇ 21ರಂದು ನ್ಯಾಯಾಲಯವು ಠಾಕುರ್ ಸಹಿತ ಪ್ರಕರಣದ ಇತರ ಆರೋಪಿಗಳಾದ ಲೆ ಕರ್ನಲ್ ಪ್ರಸಾದ್ ಪುರೋಹಿತ್ ಹಾಗೂ ಸುಧಾಕರ್ ಚತುರ್ವೇದಿ ಅವರಿಗೆ ಒಂದು ವಾರದ ಅವಧಿಗೆ ಹಾಜರಾತಿಯಿಂದ ವಿನಾಯಿತಿ ನೀಡಿತ್ತು.