ಮನೆಯೆದುರು ಮೂತ್ರ ವಿಸರ್ಜಿಸಿದ ವ್ಯಕ್ತಿಯ ಕೆನ್ನೆಗೆ ಬಾರಿಸಿದವನ ಬರ್ಬರ ಹತ್ಯೆ
ಹೊಸದಿಲ್ಲಿ, ಜೂ.4: ತನ್ನ ಮನೆಯೆದುರಿನ ರಸ್ತೆಯಲ್ಲಿ ಮೂತ್ರ ವಿಸರ್ಜಿಸಿದ ವ್ಯಕ್ತಿಗೆ ಕಪಾಳಮೋಕ್ಷಗೈದವನನ್ನು ಆ ವ್ಯಕ್ತಿಯ ಇಬ್ಬರು ಪುತ್ರರು ಥಳಿಸಿ ಸಾಯಿಸಿದ ಘಟನೆ ದಕ್ಷಿಣ ದಿಲ್ಲಿಯ ಗೋವಿಂದ್ ಪುರಿ ಪ್ರದೇಶದಿಂದ ವರದಿಯಾಗಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ಲಿಲು ಎಂದು ಗುರುತಿಸಲಾಗಿದೆ.
ಘಟನೆ ರವಿವಾರ ರಾತ್ರಿ ನಡೆದಿತ್ತು. ವಿದ್ಯುತ್ ನಿಲುಗಡೆಯಾದ ಕಾರಣ ಲಿಲು ಮತ್ತಾತನ ಪತ್ನಿ ಪಿಂಕಿ ತಮ್ಮ ನಿವಾಸದ ಹೊರಗೆ ಕುಳಿತಿದ್ದ ಸಮಯ ಅದೇ ಪರಿಸರದ ಸುಮಾರು 65 ವರ್ಷದ ವ್ಯಕ್ತಿಯೊಬ್ಬ ಅಲ್ಲೇ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ನೋಡಿದ ಲಿಲು ಅದಕ್ಕೆ ಆಕ್ಷೇಪಿಸಿ ಆತನೊಡನೆ ಜಗಳವಾಡಿ ಕೆನ್ನೆಗೆ ಬಾರಿಸಿದ್ದ. ಕೂಡಲೇ ಆ ವ್ಯಕ್ತಿಯ ಇಬ್ಬರು ಪುತ್ರರು ತಂದೆಯ ರಕ್ಷಣೆಗೆ ಧಾವಿಸಿದ್ದು ಅವರ ನಡುವೆ ಜಗಳ ತಾರಕಕ್ಕೇರಿ ಸೋದರರಲ್ಲಿ ಒಬ್ಬಾತ ಅಲ್ಲಿದ್ದ ದೊಡ್ಡ ಸಿಮೆಂಟ್ ಸ್ಲ್ಯಾಬ್ ಅನ್ನು ಕೈಗೆತ್ತಿಕೊಂಡು ಲಿಲು ತಲೆಗೆ ಹೊಡೆದಿದ್ದ. ಲಿಲುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತ ಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು.