ಪ.ಬಂಗಾಳ: ಟಿಎಂಸಿ ಮುಖಂಡನ ಗುಂಡಿಕ್ಕಿ ಹತ್ಯೆ
ಕೋಲ್ಕತಾ, ಜೂ.6: ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಟಿಎಂಸಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಿಎಂಸಿಯ ನಿಮ್ತಾ ಪ್ರದೇಶದ 6ನೇ ವಾರ್ಡ್ ಘಟಕಾಧ್ಯಕ್ಷ ನಿರ್ಮಲ್ ಕುಂಡು ಹತರಾದವರು. ಮೋಟಾರು ಬೈಕ್ನಲ್ಲಿ ಆಗಮಿಸಿದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಕುಂಡು ಅವರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ತಲೆಗೆ ಗುಂಡೇಟು ತಗುಲಿ ಕುಸಿದು ಬಿದ್ದ ಕುಂಡುರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ನಿಮ್ತಾ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಹತ್ಯೆಗೆ ಬಿಜೆಪಿ ಕಾರಣ ಎಂದು ಸ್ಥಳೀಯ ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಹತ್ಯೆಯ ಕುರಿತ ಹೆಚ್ಚಿನ ವಿವರ ದೊರಕಿಲ್ಲ . ಕೊಲೆಯ ಹಿಂದಿನ ಕಾರಣವೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Next Story