ಅಟಲ್ ಬಿಹಾರಿ ವಾಜಪೇಯಿ ಬಂಗ್ಲೆಗೆ ಅಮಿತ್ ಶಾ ವಾಸ್ತವ್ಯ ಬದಲಾವಣೆ
ಹೊಸದಿಲ್ಲಿ, ಜೂ.7: ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಾಸವಾಗಿದ್ದ ಕೃಷ್ಣ ಮೆನನ್ ಬಂಗ್ಲೆಗೆ ಗೃಹ ಸಚಿವ ಹಾಗೂ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶೀಘ್ರವೇ ಸ್ಥಳಾಂತರವಾಗಲಿದ್ದಾರೆ.
ಪ್ರಸ್ತುತ ಅಕ್ಬರ್ ರೋಡ್ನ ಬಂಗ್ಲೆಯಲ್ಲಿ ವಾಸವಾಗಿರುವ ಶಾ ಅವರಿಗೆ ಕೃಷ್ಣ ಮೆನನ್ ಮಾರ್ಗದಲ್ಲಿರುವ ಮನೆಯನ್ನು ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಮಂಜೂರು ಮಾಡಿದೆ.
ಹೊಸ ಬಂಗ್ಲೆಯು ಶಾ ಅವರ ನಾರ್ತ್ ಬ್ಲಾಕ್ ಕಚೇರಿಗೆ ಸಮೀಪವಾಗಿದ್ದು, ನಾಯಕರ ಭದ್ರತಾ ಅಗತ್ಯದ ಮೇಲೆ ನಿಗಾವಹಿಸಲು ಸಾಧ್ಯವಿದೆ. ಅಕ್ಬರ್ ರೋಡ್ನಲ್ಲಿರುವ ಬಂಗ್ಲೆ 2.3 ಎಕ್ರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಕೃಷ್ಣ ಮೆನನ್ ಬಂಗ್ಲೆ 3 ಎಕರೆಗೂ ಅಧಿಕ ಪ್ರದೇಶದಲ್ಲಿದೆ. ಇದರಲ್ಲಿ ಏಳು ಬೆಡ್ರೂಮ್ಗಳು ಹಾಗೂ ಎರಡು ಡ್ರಾಯಿಂಗ್ ರೂಮ್ಗಳಿವೆ.
ಕಳೆದ ಆಗಸ್ಟ್ನಲ್ಲಿ ವಾಜಪೇಯಿ ನಿಧನರಾದ ಬಳಿಕ ಈ ಬಂಗ್ಲೆ ಖಾಲಿಯಾಗಿತ್ತು. 2004ರ ಚುನಾವಣೆಯಲ್ಲಿ ಎನ್ಡಿಎ ಸರಕಾರ ಸೋತ ಬಳಿಕ ಮಾಜಿ ಪ್ರಧಾನಿ ವಾಜಪೇಯಿ ಈ ಬಂಗ್ಲೆಗೆ ಬಂದಿದ್ದರು. ಈ ಬಂಗ್ಲೆಯಲ್ಲಿ 14 ವರ್ಷಗ ಕಾಲ ವಾಸವಾಗಿದ್ದರು. ವಾಜಪೇಯಿ ಕುಟುಂಬ ನವೆಂಬರ್ನಲ್ಲಿ ಬಂಗ್ಲೆ ಖಾಲಿ ಮಾಡಿದೆ.
ವಾಜಪೇಯಿಗಿಂತ ಮೊದಲು ಡಿಎಂಕೆ ನಾಯಕ ಮುರಸೋಲಿ ಮಾರನ್ ಈ ಬಂಗ್ಲೆಯಲ್ಲಿದ್ದರು.