ದುಷ್ಕರ್ಮಿಗಳ ಇರಿತಕ್ಕೆ ಬಲಿಯಾದ ಮುಂಬೈ ಕ್ರಿಕೆಟಿಗ
ಮುಂಬೈ, ಜೂ.7: ಆಘಾತಕಾರಿ ಘಟನೆಯೊಂದರಲ್ಲಿ ಕ್ರಿಕೆಟಿಗ ರಾಕೇಶ್ ಅಂಬಾದಾಸ್ ಪವಾರ್ರನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಚಂದನ್ವಾಡಿ ಗ್ರಾಮದ ಬೀದಿಯಲ್ಲಿ ಇರಿದು ಕೊಂದಿದ್ದಾರೆ. ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಪೊಲೀಸರು ಪವಾರ್ ಹತ್ಯೆಯಾದ ಸ್ಥಳವನ್ನು ಮಹಜರು ನಡೆಸಿದ್ದಾರೆ. ಭಾಂಡೂಪ್ ನಿವಾಸಿಯಾಗಿರುವ 35 ವರ್ಷದ ಪವಾರ್ ಪತ್ನಿ ಹಾಗೂ ಶಾಲೆಗೆ ಹೋಗುತ್ತಿರುವ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಯುವ ಕ್ರಿಕೆಟಿಗರಿಗೆ ಕೋಚ್ ನೀಡುತ್ತಿದ್ದ ಪವಾರ್ ರಾತ್ರಿ 12:30ರ ಸುಮಾರಿಗೆ ಮಹಿಳೆಯ ಜೊತೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಮಹಾವೀರ್ ಪೆಟ್ರೋಲ್ ಪಂಪ್ ಬಳಿ ಕಾದು ನಿಂತಿದ್ದ ಮೂವರು ದುಷ್ಕರ್ಮಿಗಳು ಹರಿತ ಆಯುಧಗಳಿಂದ ಇರಿದಿದ್ದಾರೆ.
ಪೆಟ್ರೋಲ್ ಪಂಪ್ನ ಉದ್ಯೋಗಿಗಳು ಪವಾರ್ ಪ್ರಾಣ ರಕ್ಷಣೆಗೆ ಧಾವಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಲ್ಲಿಗೆ ತೆರಳಿದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾಂಡೂಪ್ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೆಟ್ರೋಲ್ ಪಂಪ್ನ ಸಿಸಿಟಿವಿ ದೃಶ್ಯವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪವಾರ್ ಜೊತೆಗಿದ್ದ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.