ಮಹಿಳೆ, ಪುತ್ರನನ್ನು ಥಳಿಸಿ ಹತ್ಯೆಗೈದ ಗುಂಪು
ಗುವಾಹತಿ, ಜೂ. 8: ಓರ್ವ ಮಹಿಳೆ ಹಾಗೂ ಆಕೆಯ ಪುತ್ರನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಅಸ್ಸಾಂನ ತೀನ್ಸುಕಿಯಾ ಜಿಲ್ಲೆಯಲ್ಲಿ ಸಂಭವಿಸಿದೆ. ಮಹಿಳೆ ತನ್ನ ಸೊಸೆಯನ್ನು ಪುತ್ರನೊಂದಿಗೆ ಸೇರಿ ಹತ್ಯೆಗೈದಿದ್ದಾರೆ ಎಂದು ಶಂಕಿಸಿ ಗುಂಪು ಇವರಿಬ್ಬರನ್ನು ಥಳಿಸಿ ಹತ್ಯೆಗೈದಿದೆ.
ಜಿಲ್ಲೆಯ ರೋಗ್ಪುರಿಯಾ ಪ್ರದೇಶದಲ್ಲಿರುವ ಸೇವ್ಪುರ್ ಚಹಾ ತೋಟದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಂಪಿನಿಂದ ಥಳಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಜಮುನಾ ತಂತಿ ಶುಕ್ರವಾರ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಪುತ್ರ ಅಜಯ್ ಶನಿವಾರ ಬೆಳಗ್ಗೆ ಸಾವನ್ನಪ್ಪಿದರು ಎಂದು ತೀನ್ಸುಕಿಯಾ ಪೊಲೀಸ್ ಠಾಣೆಯ ಉಸ್ತುವಾರಿ ದೀಪಕ್ ತಮುಲಿ ತಿಳಿಸಿದ್ದಾರೆ.
ನೆಲದಲ್ಲಿ ಬಿದ್ದ ಇಬ್ಬರಿಗೆ ಗುಂಪೊಂದು ಸಲಾಕೆ ಹಾಗೂ ದೊಣ್ಣೆಗಳಿಂದ ಥಳಿಸುತ್ತಿರುವ ಘಟನೆಯ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರವಾಗಿತ್ತು.
ಬುಧವಾರ ನಾಪತ್ತೆಯಾಗಿದ್ದ ಅಜಯ್ ಅವರ ಪತ್ನಿ ರಾಧಾ ಅವರ ಮೃತದೇಹ ಮನೆ ಸಮೀಪದ ಸೆಪ್ಟಿಕ್ ಟ್ಯಾಂಕ್ನಲ್ಲಿ ಶುಕ್ರವಾರ ಪತ್ತೆಯಾದ ಬಳಿಕ ಈ ಘಟನೆ ನಡೆದಿದೆ. ದಂಪತಿಯ ಎರಡು ತಿಂಗಳ ಹೆಣ್ಣು ಮಗುವೊಂದು ಕೂಡ ಬುಧವಾರ ಕಾಣೆಯಾಗಿದ್ದು, ಇದುವರೆಗೆ ಪತ್ತೆಯಾಗಿಲ್ಲ. ‘‘ಅನಾಮಿಕ ವ್ಯಕ್ತಿಗಳ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ. ಇದುವರೆಗೆ ಯಾರನ್ನು ಕೂಡ ಬಂಧಿಸಿಲ್ಲ’’ ಎಂದು ತಮುಲಿ ಹೇಳಿದ್ದಾರೆ.