ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: 6 ಮಂದಿ ದೋಷಿಗಳು
ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟ
ಶ್ರೀನಗರ, ಜೂ.10: ಜಮ್ಮು –ಕಾಶ್ಮೀರದ ಜಿಲ್ಲೆಯ ಕಥುವಾದಲ್ಲಿ 8ರ ಹರೆಯದ ಬಾಲಕಿಯ ಮೇಲೆ ಸರಣಿ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ಪ್ರಕರಣದ ಆರೋಪಿಗಳ ಪೈಕಿ ಆರು ಮಂದಿ ದೋಷಿಗಳೆಂದು ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ರಾಸನಾ ಗ್ರಾಮದ ಮುಖ್ಯಸ್ಥ ಸಾಂಜಿರಾಮ್ , ಪಿಎಸ್ ಐ ಆನಂದ್ ದತ್ತಾ ವರ್ಮಾ, ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜುರಿಯಾ ಮತ್ತು ಸುರೇಂದ್ರ ವರ್ಮಾ ,ಹೆಡ್ ಕಾನ್ ಸ್ಟೇಬಲ್ ತಿಲಕ್ ರಾಜ್, ಪ್ರವೇಶ್ ದೋಷಿ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಾಂಜಿ ರಾಮ್ ಪುತ್ರ ವಿಶಾಲ್ ಜನಗೋತ್ರಾನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ..
2018 , ಜನವರಿ 10ರಂದು ಬಾಲಕಿಯನ್ನು ತಂಡವೊಂದು ಅಪಹರಿಸಿ, ಸರಣಿ ಅತ್ಯಾಚಾರ ನಡೆಸಿ, ಕೊಲೆಗೈದು ಪರಾರಿಯಾಗಿತ್ತು.
ಕಥುವಾದ ಬಾಲಕಿಯನ್ನು ಅಪಹರಿಸಿ ಇಲ್ಲಿನ ದೇವಸ್ಥಾನವೊಂದರಲ್ಲಿ ಇರಿಸಿ ದುಷ್ಕರ್ಮಿಗಳು ನಿರಂತರ ಅತ್ಯಾಚಾರವೆಸಗಿದ್ದರು. ಬಾಲಕಿಗೆ ಮಾದಕದ್ರವ್ಯವನ್ನು ನೀಡಲಾಗಿತ್ತು. ಅತ್ಯಾಚಾರವೆಸಗಿದ ನಂತರ ದುಷ್ಕರ್ಮಿಗಳು ಬಾಲಕಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದರು. ಜನವರಿ 17ರಂದು ಬಾಲಕಿಯ ಮೃತದೇಹ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.