ಜಮ್ಮು ಕಾಶ್ಮೀರದ ಸಾರ್ವಜನಿಕ ಸುರಕ್ಷತಾ ಕಾಯ್ದೆ ಕುರಿತ ಆ್ಯಮ್ನೆಸ್ಟಿ ವರದಿ ಬಿಡುಗಡೆಗೆ ಅನುಮತಿ ನಿರಾಕರಣೆ
“ಕಾಯ್ದೆಯಿಂದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಉಲ್ಲಂಘನೆ”
ಹೊಸದಿಲ್ಲಿ, ಜೂ.13: ಜಮ್ಮು ಕಾಶ್ಮೀರದ ವಿವಾದಿತ ಸಾರ್ವಜನಿಕ ಸುರಕ್ಷತಾ ಕಾಯಿದೆಯ ಕುರಿತಾದ ವರದಿಯನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಬುಧವಾರ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಉದ್ದೇಶಿಸಿದ್ದ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಗೆ ಅನುಮತಿ ನಿರಾಕರಿಸಲಾಗಿದೆ. ಪ್ರಸಕ್ತ `ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ' ಕಾರಣ ನೀಡಿ ಜಿಲ್ಲಾಡಳಿತ ಈ ಪತ್ರಿಕಾಗೋಷ್ಠಿಗೆ ಅನುಮತಿ ನಿರಾಕರಿಸಿದೆ.
ಶ್ರೀನಗರ ಜಿಲ್ಲಾಧಿಕಾರಿ ಕಚೇರಿಯ ಕೆಲ ಅಧಿಕಾರಿಗಳು ಈ ಕುರಿತಂತೆ ಮೌಖಿಕ ಮಾಹಿತಿ ನೀಡಿದ್ದಾರೆಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಮಾಧ್ಯಮ ಘಟಕದ ಉಸ್ತುವಾರಿ ಹೊಂದಿರುವ ನದಿಯಾ ಈರಂ ತಿಳಿಸಿದ್ದಾರೆ.
ಆಮ್ನೆಸ್ಟಿ ವರದಿ ‘ಟೈರೆನ್ನಿ ಆಫ್ ಎ ಲಾಲೆಸ್ಸ್ ಲಾ : ಡಿಟೆನ್ಶನ್ ವಿದೌಟ್ ಚಾರ್ಜ್ ಆರ್ ಟ್ರಯಲ್ ಅಂಡರ್ ದಿ ಜೆ & ಕೆ ಪಬ್ಲಿಕ್ ಸೇಫ್ಟಿ ಆ್ಯಕ್ಟ್'' ಅನ್ನು ಜಾಗತಿಕವಾಗಿ ಆನ್ಲೈನ್ ಮೂಲಕ ಬಿಡುಗಡೆಗೊಳಿಸಲಾಗಿದ್ದು, ಈ ವಿವಾದಿತ ಕಾಯಿದೆಯನ್ನು ವಾಪಸ್ ಪಡೆಯಬೇಕೆಂದು ವರದಿಯಲ್ಲಿ ಆಮ್ನೆಸ್ಟಿ ಆಗ್ರಹಿಸಿದೆ.
ರಾಜ್ಯದ ಆಡಳಿತ ಹಾಗೂ ಸ್ಥಳೀಯ ಜನರ ನಡುವೆ ಉದ್ವಿಗ್ನತೆಯನ್ನು ಈ ಕಾಯಿದೆ ಪ್ರಚೋದಿಸುತ್ತಿದೆಯೆಂದೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮುಖ್ಯಸ್ಥ ಆಕಾರ್ ಪಟೇಲ್ ಹೇಳಿದ್ದಾರೆ.
ರಾಜ್ಯದ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ವ್ಯಕ್ತಿಯನ್ನು ಈ ಕಾಯಿದೆಯಡಿ ಎರಡು ವರ್ಷಗಳ ತನಕ ಬಂಧಿಸಬಹುದಾಗಿದೆ ಹಾಗೂ ವ್ಯಕ್ತಿಯೊಬ್ಬ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಕಾರ್ಯಾಚರಿಸಿದರೆ ಒಂದು ವರ್ಷ ತನಕ ಬಂಧನದಲ್ಲಿಡುವ ಅಧಿಕಾರವನ್ನು ಆಡಳಿತಕ್ಕೆ ಈ ಕಾನೂನು ಒದಗಿಸುವುದಲ್ಲದೆ ಬಂಧನದ ಸಮಯ ಯಾವುದೇ ಮಾಹಿತಿ ನೀಡುವ ಅಗತ್ಯವೂ ಇಲ್ಲವಾಗಿದೆ.
ಈ ಕಾಯಿದೆಯಡಿ 2007 ಹಾಗೂ 2016ರ ನಡುವೆ 2,400 ಜನರನ್ನು ಬಂಧಿಸಲಾಗಿತ್ತಾದರೂ ಅವುಗಳಲ್ಲಿ ಶೇ 58ರಷ್ಟು ಮಂದಿಯನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿದ್ದವು.
ಈ ಕಾಯಿದೆಯಡಿಯಲ್ಲಿ 2012-2018ರ ಅವಧಿಯಲ್ಲಿ 210 ಜನರ ಬಂಧನ ಪ್ರಕರಣಗಳನ್ನು ತನ್ನ ವರದಿ ಸಿದ್ಧ ಪಡಿಸುವಾಗ ಆಮ್ನೆಸ್ಟಿ ಪರಿಶೀಲಿಸಿತ್ತಲ್ಲದೆ ಈ ಕಾನೂನನ್ನು ದುರುಪಯೋಗ ಪಡಿಸಲಾಗುತ್ತಿದೆಯೆಂದೂ ಕಂಡು ಕೊಂಡಿತ್ತು. ಬಂಧಿತರಿಗೆ ಜಾಮೀನು ನಿರಾಕರಿಸುವ ನಿಟ್ಟಿನಲ್ಲಿ ನ್ಯಾಯಾಧೀಶರು ನೀಡುತ್ತಿರುವ ಆದೇಶಗಳು ಒಂದೇ ರೀತಿಯಾಗಿದ್ದವು. ಈ ಕಾಯಿದೆಯು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಉಲ್ಲಂಘನೆಯೂ ಆಗಿದೆ ಎಂದು ಆಮ್ನೆಸ್ಟಿ ಹೇಳಿದೆ.
ಈ ಕಾಯಿದೆ ಮತ್ತದರ ಜಾರಿ ಕುರಿತಾದ ವರದಿಗಳನ್ನು ಆಮ್ನೆಸ್ಟಿ 2011 ಹಾಗೂ 2012ರಲ್ಲಿಯೂ ಪ್ರಕಟಿಸಿತ್ತು.