ಮಕ್ಕಳ ಸಾವಿಗಿಂತ ಕ್ರಿಕೆಟ್ ಸ್ಕೋರ್ ಬಗ್ಗೆಯೇ ಬಿಹಾರ ಆಹಾರ ಸಚಿವರಿಗೆ ಕುತೂಹಲ!
ಪಾಟ್ನಾ, ಜೂ.18: ಬಿಹಾರದಲ್ಲಿ ಮೆದುಳಿನ ಉರಿಯೂತ ರೋಗದಿಂದ ನೂರಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಗಂಭೀರ ವಿಚಾರದ ಬಗ್ಗೆ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ, ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಗೆಗಿನ ಕುತೂಹಲದಿಂದ ಸಭೆಯ ಮಧ್ಯದಲ್ಲೇ ಎಷ್ಟು ವಿಕೆಟ್ ಉರುಳಿದೆ? ಎಂದು ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಪಕ್ಕದಲ್ಲೇ ಕುಳಿತಿದ್ದ ಬಿಹಾರದ ಆರೋಗ್ಯ ಸಚಿವರು ಸಭೆಯ ಮಧ್ಯದಲ್ಲೇ "ಎಷ್ಟು ವಿಕೆಟ್ಗಳು ಉರುಳಿದವು" ಎಂದು ಪ್ರಶ್ನಿಸಿದರು.
ಆಗ ಯಾರೋ, "ನಾಲ್ಕು ವಿಕೆಟ್ ಬಿದ್ದಿವೆ" ಎಂದು ಉತ್ತರಿಸಿದ್ದಾರೆ. ರವಿವಾರ ಮ್ಯಾಂಚೆಸ್ಟರ್ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 89 ರನ್ನುಗಳ ಭರ್ಜರಿ ಜಯ ಸಾಧಿಸಿತ್ತು.
ಮುಝಾಫರ್ಪುರ ಜಿಲ್ಲೆಯೊಂದರಲ್ಲೇ ಮೃತಪಟ್ಟ ಮಕ್ಕಳ ಸಂಖ್ಯೆ 104ಕ್ಕೆ ತಲುಪಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಹಾರ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ, ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂದು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕುಟುಂಬದವರು ಆಪಾದಿಸಿದ್ದಾರೆ. ರವಿವಾರ ಕೇಂದ್ರ ಆರೋಗ್ಯ ಸಚಿವರು ಎಸ್ಕೆಎಂಸಿಎಚ್ ಆಸ್ಪತ್ರೆಗೆ ಭೇಟಿ ನೀಡಿದಾಗ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಯಿತು.