ಒಂದು ರಾಷ್ಟ್ರ, ಒಂದು ಚುನಾವಣೆ: ಕಾನೂನು ಆಯೋಗದ ಶಿಫಾರಸುಗಳು
ಹೊಸದಿಲ್ಲಿ, ಜೂ.19: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸರಕಾರದ ನಿರ್ಧಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತು ಕಾನೂನು ಆಯೋಗ ಸರಕಾರಕ್ಕೆ ಕೆಲವು ಶಿಫಾರಸುಗಳನ್ನು ಸಲ್ಲಿಸಿದೆ.
ಕಾನೂನು ಆಯೋಗವು ಕಳೆದ ಆಗಸ್ಟ್ನಲ್ಲಿ ಸಲ್ಲಿಸಿರುವ ಕರಡು ಶಿಫಾರಸಿನಲ್ಲಿ ಇಂತಹ ಬೃಹತ್ ಪ್ರಮಾಣದ ಪ್ರಯೋಗಕ್ಕೆ ಮುನ್ನ ದೃಢ ಕಾನೂನು ಚೌಕಟ್ಟನ್ನು ರಚಿಸಲು ಸೂಚಿಸಿದೆ. ಜೊತೆಗೆ ಸಂವಿಧಾನಕ್ಕೆ ಹಾಗೂ ಪ್ರಜಾಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರಲು ಶಿಫಾರಸು ಮಾಡಿದೆ. ಸಂವಿಧಾನದ ಕನಿಷ್ಟ ಎರಡು ಉಪಬಂಧಗಳಿಗೆ ತಿದ್ದುಪಡಿ ಮಾಡುವ ಜೊತೆಗೆ ರಾಜ್ಯಗಳ ಬಹುಮತದ ಬೆಂಬಲವಿದ್ದರೆ ಲೋಕಸಭೆಗೆ ಹಾಗೂ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆಯಲ್ಲಿ ಎರಡು ಹಂತದಲ್ಲಿ ನಡೆಸಬಹುದು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಆಯೋಗದ ಆಶಯಗಳಿಗೆ ಸಹಮತ ವ್ಯಕ್ತಪಡಿಸಿರುವ ಮಾಜಿ ಚುನಾವಣಾ ಆಯುಕ್ತ ಟಿಎಸ್ ಕೃಷ್ಣಮೂರ್ತಿ, ಒಂದು ದೇಶ ಒಂದು ಚುನಾವಣೆ ಎಂಬ ಯೋಜನೆ ತುಂಬಾ ಆಕರ್ಷಕವಾಗಿದ್ದರೂ, ಸಂವಿಧಾನಕ್ಕೆ ತಿದ್ದುಪಡಿ ತಂದು, ವಿಧಾನಸಭೆಗೆ ನಿಗದಿತ ಅವಧಿ ನಿರ್ಧರಿಸದ ಹೊರತು ಇದನ್ನು ಜಾರಿಗೊಳಿಸಲಾಗದು ಎಂದಿದ್ದಾರೆ. ಕೃಷ್ಣಮೂರ್ತಿ 2004ರ ಲೋಕಸಭಾ ಚುನಾವಣೆ ಸಂದರ್ಭ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು. ಯೋಜನೆ ಜಾರಿಗೆ ಮುನ್ನ ಅರೆಸೇನಾ ಪಡೆಯ ಬಲವನ್ನು ಹೆಚ್ಚಿಸುವುದೂ ಸೇರಿದಂತೆ ಹಲವಾರು ಆಡಳಿತಾತ್ಮಕ ವ್ಯವಸ್ಥೆಯ ಅಗತ್ಯವಿದೆ.
ಈ ಯೋಜನೆಯಿಂದ ಹಲವು ಅನುಕೂಲಗಳಿವೆ. ಆದರೆ ಸರಕಾರದ ವಿರುದ್ಧ ಮಂಡನೆಯಾಗುವ ಅವಿಶ್ವಾಸ ನಿರ್ಣಯ ಈ ಯೋಜನೆಗೆ ಬಹುದೊಡ್ಡ ತೊಡಕಾಗಿದೆ. ಅಲ್ಲದೆ, ಈ ಯೋಜನೆ ಜಾರಿಗೊಳ್ಳುವಾಗ ಕೆಲವು ರಾಜ್ಯದ ವಿಧಾನಸಭೆಯ ಅವಧಿ ಇನ್ನೂ ನಾಲ್ಕು- ನಾಲ್ಕೂವರೆ ವರ್ಷ ಇರಬಹುದು. ಆಗ ಪರಿವರ್ತನೆಯ ನಿಬಂಧನೆಯ ಅಗತ್ಯ ಬೀಳಬಹುದು ಎಂದು ಕೃಷ್ಣಮೂರ್ತಿ ಹೇಳಿದ್ದಾರೆ. ಬಹುಮತ ದೊರೆತ ಪಕ್ಷದ ಮುಖಂಡನನ್ನು ಇಡೀ ಸದನ(ಲೋಕಸಭೆ ಅಥವಾ ವಿಧಾನಸಭೆ) ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಎಂದು ಆಯ್ಕೆ ಮಾಡಬೇಕು. ಆಗ ಸರಕಾರ, ಲೋಕಸಭೆ ಅಥವಾ ವಿಧಾನಸಭೆಯ ಸ್ಥಿರತೆಗೆ ಪೂರಕವಾಗಿರುತ್ತದೆ ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ.
ಸರಕಾರದ ಚಿಂತಕರ ಚಾವಡಿ ಎನಿಸಿರುವ ನೀತಿ ಆಯೋಗವು, ಆಡಳಿತ ಕಾರ್ಯಕ್ಕೆ ಚುನಾವಣೆಯ ಪ್ರಚಾರಗಳಿಂದ ಆಗುತ್ತಿರುವ ಅಡ್ಡಿಯನ್ನು ಉಲ್ಲೇಖಿಸಿ 2014ರ ಬಳಿಕ ಏಕಕಾಲದಲ್ಲಿ ಎರಡು ಹಂತದ ಲೋಕಸಭೆ-ವಿಧಾನಸಭೆ ಚುನಾವಣೆ ನಡೆಸಲು ಕಳೆದ ವರ್ಷ ಶಿಫಾರಸು ಮಾಡಿದೆ.