ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಮುಖ್ಯಮಂತ್ರಿ
ಭೋಪಾಲ್, ಜೂ.22: ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಇಂದು ಇಲ್ಲಿನ ಹಮೀದಿಯಾ ಸರಕಾರಿ ಆಸ್ಪತ್ರೆಯಲ್ಲಿ ಬೆರಳಿನ ಶಸ್ತ್ರಕ್ರಿಯೆಗೊಳಗಾಗಿದ್ದಾರೆ. ಮುಖ್ಯಮಂತ್ರಿಯ ಟ್ರಿಗ್ಗರ್ ಫಿಂಗರ್ ಸಮಸ್ಯೆಗೆ ಈ ಶಸ್ತ್ರಕ್ರಿಯೆ ನಡೆಸಲಾಗಿದೆ. ಈ ಸಮಸ್ಯೆಯಿರುವವರ ಬೆರಳಿನಲ್ಲಿ ನೋವು, ಬೆರಳುಗಳನ್ನು ಬಗ್ಗಿಸುವಾಗ ಹಾಗೂ ನೇರ ಮಾಡುವಾಗ ಬಿಗಿದಂತಹ ಅನುಭವವಾಗುತ್ತದೆ.
ಕಮಲ್ ನಾಥ್ ಅವರನ್ನು ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನೀಗ ನಿಗಾದಲ್ಲಿಡಲಾಗಿದ್ದು ಸಂಜೆಯ ವೇಳೆಗೆ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಡೀನ್ ಅರುಣಾ ಕುಮಾರ್ ಹೇಳಿದ್ದಾರೆ.
ಕಮಲ್ ನಾಥ್ ಅವರ ಬಲಗೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶುಕ್ರವಾರ ಸಂಜೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಟ್ರಿಗ್ಗರ್ ಫಿಂಗರ್ ಸಮಸ್ಯೆಯಿರುವುದು ಕಂಡು ಬಂದಿತ್ತು.
ಮುಖ್ಯಮಂತ್ರಿಯನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಆಗಮಿಸದಂತೆ ಪಕ್ಷ ಕಾರ್ಯಕರ್ತರಿಗೆ ಕಾಂಗ್ರೆಸ್ ಮಾಧ್ಯಮದ ಘಟಕದ ಸಂಚಾಲಕ ನರೇಂದ್ರ ಸಲೂಜ ಹೇಳಿದ್ದಾರೆ.
ಮುಖ್ಯಮಂತ್ರಿ ಕಮಲ್ ನಾಥ್ ಸರಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದನ್ನು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸ್ವಾಗತಿಸಿದ್ದಾರೆ.