ಪೆಂಡಾಲ್ ಕುಸಿದು 14 ಮಂದಿ ಮೃತ್ಯು: 50 ಜನರಿಗೆ ಗಾಯ
ಹೊಸದಿಲ್ಲಿ, ಜೂ.23: ಧಾರ್ಮಿಕ ಕಾರ್ಯಕ್ರಮವೊಂದರ ಪೆಂಡಾಲ್ ಕುಸಿದು ಬಿದ್ದು 14 ಮಂದಿ ಮೃತಪಟ್ಟು 50 ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ಪೆಂಡಾಲ್ ಕುಸಿದಿದೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಘಟನೆಯ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಬಾಡಮೇರ್ನ ಬಾಲೊತರಾ ಪ್ರದೇಶದ ಜಸೋಲ ಗ್ರಾಮದಲ್ಲಿ ರಾಮಕಥಾ ಪ್ರವಚವನ್ನು ಆಲಿಸುತ್ತಿದ್ದ ಸಂದರ್ಭ ಟೆಂಟ್ ಕುಸಿದಿದೆ. ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವ ಕಾರಣ ಮೃತಪಟ್ಟವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ದುರ್ಘಟನೆಯಲ್ಲಿ ಮೃತಪಟ್ಟವರ ಖಚಿತ ಸಂಖ್ಯೆ ಇದುವರೆಗೆ ತಿಳಿದು ಬಂದಿಲ್ಲ. ಪ್ರಸ್ತುತ ದುರ್ಘಟನೆಯಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ’’ ಎಂದು ಬಾಲೊತರಾದ ಸಬ್ ಇನ್ಸ್ಪೆಕ್ಟರ್ ಖೇತರಾಮ್ ತಿಳಿಸಿದ್ದಾರೆ.