ಕೆಲಸದಾಳು ಸಹಿತ ವೃದ್ಧ ದಂಪತಿಯ ಕತ್ತು ಸೀಳಿ ಹತ್ಯೆ
ಹೊಸದಿಲ್ಲಿ, ಜೂ.23: ವೃದ್ಧ ದಂಪತಿ ಹಾಗೂ ಅವರ ಮನೆಕೆಲಸ ಯುವತಿಯನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ದಕ್ಷಿಣ ದಿಲ್ಲಿಯ ವಸಂತ ವಿಹಾರದಲ್ಲಿರುವ ಫ್ಲಾಟ್ ಒಂದರಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ವಿಷ್ಣು ಮಾಥುರ್(78 ವರ್ಷ), ಅವರ ಪತ್ನಿ ಶಶಿ ಮಾಥುರ್(75 ವರ್ಷ) ಹಾಗೂ ಅವರ ಮನೆಯಲ್ಲಿ ಕೆಲಸಕ್ಕಿದ್ದ ಖುಷ್ಬು ಎಂಬವರ ಮೃತದೇಹ ಗಂಟಲು ಸೀಳಿದ ಸ್ಥಿತಿಯಲ್ಲಿ ಅವರ ಮನೆಯ ಫ್ಲಾಟ್ನಲ್ಲಿ ಪತ್ತೆಯಾಗಿದೆ. ಮನೆಕೆಲಸಕ್ಕೆ ಬರುತ್ತಿದ್ದ ಮತ್ತೊಬ್ಬ ಕೆಲಸದಾಕೆ ರವಿವಾರ ಬೆಳಿಗ್ಗೆ ಮನೆಗೆ ಬಂದಾಗಲೇ ಘಟನೆ ಬೆಳಕಿಗೆ ಬಂದಿದೆ. ಆಕೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ನೈಋತ್ಯ ದಿಲ್ಲಿ ಪೊಲೀಸ್ ಉಪ ಆಯುಕ್ತ ದೇವೇಂದರ್ ಆರ್ಯ ಹೇಳಿದ್ದಾರೆ.
ಮೃತ ದಂಪತಿ ನಿವೃತ್ತ ಸರಕಾರಿ ನೌಕರರಾಗಿದ್ದು, ಪರಿಚಿತರಿಂದಲೇ ಕೃತ್ಯ ನಡೆದಿರುವ ಬಗ್ಗೆ ಅನುಮಾನವಿದೆ. ಮನೆಯ ವಸ್ತುಗಳನ್ನೆಲ್ಲಾ ಚಲ್ಲಾಪಿಲ್ಲಿಯಾಗಿ ಎಸೆಯಲಾಗಿದ್ದು ದರೋಡೆ ನಡೆಸುವ ಉದ್ದೇಶದಿಂದ ಮನೆಗೆ ನುಗ್ಗಿರುವ ಸಾಧ್ಯತೆಯಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಮೃತ ದಂಪತಿಯ ಪುತ್ರಿ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಪುತ್ರ ಕೆಲ ವರ್ಷದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.