ಆದಿವಾಸಿ ಮಹಿಳೆಯರಿಗೆ ಕಿರುಕುಳ ನೀಡುವ ಮುಸ್ಲಿಮರ ತಲೆ ಕಡಿಯುತ್ತೇನೆ: ಬಿಜೆಪಿ ಸಂಸದ
ಹೊಸದಿಲ್ಲಿ, ಜೂ.24: ತೆಲಂಗಾಣದ ಆದಿವಾಸಿ ಜಿಲ್ಲೆಯಲ್ಲಿ ಆದಿವಾಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆನ್ನಲಾದ ಮುಸ್ಲಿಂ ಯುವಕರ ತಲೆ ಕಡಿಯುವುದಾಗಿ ಹೇಳಿಕೆ ನೀಡಿ ಅದಿಲಾಬಾದ್ ಕ್ಷೇತ್ರದ ಬಿಜೆಪಿ ಸಂಸದ ಸೋಯಂ ಬಾಪು ವಿವಾದಕ್ಕೀಡಾಗಿದ್ದಾರೆ.
ಸಂಸದನ ಹೇಳಿಕೆಯನ್ನು ಖಂಡಿಸಿ ಹಾಗೂ ಕ್ರಮಕ್ಕೆ ಆಗ್ರಹಿಸಿ ಅಲ್ಪಸಂಖ್ಯಾತ ಸಮುದಾಯದ ನಾಯಕರು ಪೊಲೀಸ್ ದೂರು ನೀಡಿದ್ದಾರೆ. ದೂರನ್ನು ಕಾಂಗ್ರೆಸ್ ಅಲ್ಪಸಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಾಝಿದ್ ಖಾನ್ ಅವರು ಅದಿಲಾಬಾದ್ ಎಎಸ್ಪಿ ಕಂಚ ಮೋಹನ್ ಅವರಿಗೆ ಸಲ್ಲಿಸಿದ್ದಾರೆ. ಸಂಸದ ತಮ್ಮ ಮಾತುಗಳನ್ನು ವಾಪಸ್ ಪಡೆಯಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಸಂಸದನಾಗಿದ್ದುಕೊಂಡು ಸೋಯಂ ಬಾಪು ಅಲ್ಪಸಂಖ್ಯಾತರ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆಂದು ಸಾಜಿದ್ ಖಾನ್ ದೂರಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿಯ ಎಂ ಕೃಷಂಕ್ ಕೂಡ ಸಂಸದನ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ``ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಹೇಳುತ್ತಿದ್ದರೂ ಅವರದೇ ಪಕ್ಷದ ಸಂಸದ ತೆಲಂಗಾಣ ಪ್ರವೇಶಿಸುವ ಹತಾಶ ಯತ್ನವಾಗಿ ಇಂತಹ ಹೇಳಿಕೆ ನೀಡಿದ್ದಾರೆ'' ಎಂದು ಅವರು ದೂರಿದ್ದಾರೆ.