ಬಾಲಕಿಯ ಅತ್ಯಾಚಾರಗೈದು, ಕೊಂದವನಿಗೆ ಗುಂಡಿಕ್ಕಿದ ಪೊಲೀಸ್ ಅಧಿಕಾರಿಗೆ ವ್ಯಾಪಕ ಪ್ರಶಂಸೆ
ಒಂದೇ ದಿನದಲ್ಲಿ ಹೀರೋ ಆದ ಅಜಯ್ ಶರ್ಮಾ
ಲಕ್ನೋ, ಜೂ.24: ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆಗೈದ ದುಷ್ಕರ್ಮಿಯನ್ನು ಎನ್ ಕೌಂಟರ್ ನಲ್ಲಿ ಸೆರೆಹಿಡಿದ ಪೊಲೀಸ್ ಅಧಿಕಾರಿ ಅಜಯ್ ಶರ್ಮಾರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ದುಷ್ಕೃತ್ಯ ಎಸಗಿ ಆರೋಪಿ ನಾಝಿಲ್ ತಲೆಮರೆಸಿಕೊಂಡಿದ್ದ. ಆತನಿಗಾಗಿ ಹುಡುಕಾಟ ನಡೆಸಿದಾಗ ಆತ ಪ್ರತಿದಾಳಿ ನಡೆಸಿದ್ದ. ರಾಮ್ ಪುರ ಜಿಲ್ಲೆಯಲ್ಲಿ ಮೇ 7ರಂದು ಬಾಲಕಿಯನ್ನು ಅತ್ಯಾಚಾರಗೈದಿದ್ದ ಈತ ಆಕೆಯನ್ನು ಕೊಲೆಗೈದಿದ್ದ.
ಅಜಯ್ ಶರ್ಮಾ ‘ಎನ್ ಕೌಂಟರ್ ಸ್ಪೆಷಲಿಸ್ಟ್’ ಎಂದೇ ಹೆಸರುವಾಸಿಯಾಗಿದ್ದು, ದುಷ್ಕರ್ಮಿ ನಾಝಿಲ್ ಕಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದರು. ಗಾಯಗೊಂಡಿರುವ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಯ್ ಶರ್ಮಾ ಅವರು ಉತ್ತರ ಪ್ರದೇಶದ ಸಿಂಗಂ ಎಂದೇ ಹೆಸರುವಾಸಿಯಾಗಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಜಯ್ ಶರ್ಮಾ, “ಅತ್ಯಾಚಾರಿ ಮತ್ತು ಕೊಲೆ ಆರೋಪಿಯ ವಿರುದ್ಧದ ನಮ್ಮ ಕಾರ್ಯಾಚರಣೆಗೆ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು. ಇಂದು ದೇಶದೆಲ್ಲೆಡೆಯಿಂದ 1000ಕ್ಕೂ ಅಧಿಕ ಕರೆಗಳು ಬಂದಿದ್ದು, ನನ್ನನ್ನು ಸಹೋದರ, ಮಗ ಎಂದು ಕರೆದಿದ್ದಾರೆ” ಎಂದಿದ್ದಾರೆ.