ಮರದಿಂದ ಬಿದ್ದು ಗಾಯವಾದದ್ದು ಎಡ ಕೈಗೆ, ವೈದ್ಯರು ಚಿಕಿತ್ಸೆ ನೀಡಿದ್ದು ಬಲ ಕೈಗೆ!
Photo: ANI
ದರ್ಭಾಂಗ, ಜೂ.26; ಮಾವಿನ ಮರದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಬಾಲಕನ ಎಡ ಕೈಗೆ ಗಾಯವಾಗಿದ್ದು, ಆದರೆ ವೈದ್ಯರು ಬಲ ಕೈಗೆ ಪ್ಲಾಸ್ಟರ್ ಹಾಕಿರುವ ಘಟನೆ ನಡೆದಿದ್ದು, ಇದು ಬಿಹಾರದ ವೈದ್ಯಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ. ಈಗಾಗಲೇ ಮೆದುಳು ಜ್ವರದಿಂದ 100ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆಯಿಂದ ಬಿಹಾರದ ರಾಜ್ಯ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
“ಅವರು ಚಿಕಿತ್ಸೆ ನೀಡುವ ಸಂದರ್ಭ ನಾನು ಅವರಿಗೆ ಹೇಳಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಮಾತುಗಳನ್ನು ಕೇಳದೆ ಇನ್ನೊಂದು ಕೈಗೆ ಚಿಕಿತ್ಸೆ ನೀಡಿದರು” ಎಂದು 7 ವರ್ಷದ ಬಾಲಕ ಫೈಝಾನ್ ಹೇಳಿದ್ದಾನೆ.
“ಈ ಬಗ್ಗೆ ತನಿಖೆ ನಡೆಯಲೇಬೇಕು. ಮಗನಿಗೆ ಒಂದು ಮಾತ್ರೆಯನ್ನೂ ಸಹ ವೈದ್ಯರು ನೀಡಲಿಲ್ಲ” ಎಂದು ಬಾಲಕನ ತಾಯಿ ಹೇಳಿದ್ದಾರೆ.
ಈ ವಿಚಾರ ಈಗಾಗಲೇ ರಾಜ್ಯ ವೈದ್ಯಕೀಯ ಇಲಾಖೆಗೆ ತಲುಪಿದ್ದು, ವೈದ್ಯಕೀಯ ಕೇಂದ್ರದ ಸುಪರಿಂಟೆಂಡೆಂಟ್ ವರದಿ ನೀಡಬೇಕು ಎಂದು ಸಚಿವ ಮಂಗಲ್ ಪಾಂಡೆ ಆದೇಶಿಸಿದ್ದಾರೆ.
Next Story