ಪ್ರಜ್ಞಾ ಸಿಂಗ್ ಶಾಪದ ಹೇಳಿಕೆ ಪ್ರತಿಭಟಿಸಲು ವಿಧಾನಸಭೆಗೆ ಹೇಮಂತ್ ಕರ್ಕರೆ ವೇಷದಲ್ಲಿ ಬಂದ ಶಾಸಕ !
ಮುಂಬೈ : ಬುಧವಾರ ಮಹಾರಾಷ್ಟ್ರದ ವಿಧಾನಸಭೆಗೆ ಹುತಾತ್ಮ ಐಪಿಎಸ್ ಅಧಿಕಾರಿ, ರಾಜ್ಯದ ಭಯೋತ್ಪಾದನಾ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಬಂದಿದ್ದರು ! ಅಲ್ಲ , ಹೇಮಂತ್ ಕರ್ಕರೆಯ ವೇಷದಲ್ಲಿ ಎನ್ ಸಿ ಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಗಜ್ ಭೈ ಬಂದಿದ್ದರು. ಭೋಪಾಲ್ ಬಿಜೆಪಿ ಸಂಸದೆ ಹಾಗು ಮಾಲೇಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ಅವರು ಕರ್ಕರೆ ವಿರುದ್ಧ ನೀಡಿದ್ದ ಹೇಳಿಕೆಯನ್ನು ಪ್ರತಿಭಟಿಸಲು ಪ್ರಕಾಶ್ ಹೀಗೆ ಮಾಡಿದ್ದರು.
ಮುಂಗಾರು ಅಧಿವೇಶನ ನಡೆಯುತ್ತಿರುವ ಮಹಾರಾಷ್ಟ್ರದ ವಿಧಾನ ಪರಿಷತ್ ಗೆ ಬುಧವಾರ ಸಂಪೂರ್ಣ ಪೊಲೀಸ್ ವೇಷಭೂಷಣದಲ್ಲಿ ಬಂದಿದ್ದ ಪ್ರಕಾಶ್ ಕೈಯಲ್ಲಿ ಒಂದು ಭಿತ್ತಿಪತ್ರ ಹಿಡಿದುಕೊಂಡಿದ್ದರು. ಅದರಲ್ಲಿ "ನಾನು ( ಕರ್ಕರೆ ) ಪ್ರಜ್ಞಾ ಸಿಂಗ್ ರ ಶಾಪದಿಂದ ಮೃತಪಟ್ಟೆ ಎಂಬುದು ಮೂಢನಂಬಿಕೆ. ನಾನು ಈ ದೇಶಕ್ಕಾಗಿ ಹುತಾತ್ಮನಾದೆ" ಎಂದು ಬರೆದಿತ್ತು.
ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಪ್ರಜ್ಞಾ ಸಿಂಗ್ ತನಗೆ ನೀಡಿದ ಚಿತ್ರಹಿಂಸೆಗೆ ಪ್ರತಿಯಾಗಿ ತಾನು ನೀಡಿದ ಶಾಪದಿಂದಾಗಿ ಕರ್ಕರೆ ಮೃತಪಟ್ಟರು ಎಂದು ಹೇಳಿ ಭಾರೀ ವಿವಾದವಾಗಿತ್ತು. ಬಳಿಕ ಆಕೆ ವಿಷಾದ ವ್ಯಕ್ತಪಡಿಸಿದ್ದರು.
ತನ್ನ ಹೊಸ ಗೆಟ್ ಅಪ್ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಪ್ರಕಾಶ್ "ತಾನು ಯಾರ ವಿರುದ್ಧವೂ ಮಾತಾಡುವುದಿಲ್ಲ. ಆದರೆ ದೇಶದಲ್ಲಿ ಮೂಢನಂಬಿಕೆ ಸಂಪೂರ್ಣ ಇಲ್ಲವಾಗಬೇಕು" ಎಂದು ಹೇಳಿದರು.