ಕಾರು ಚಾಲಕನಿಗೆ ಥಳಿಸಿ, ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿದ ದುಷ್ಕರ್ಮಿಗಳು
ಎಫ್ ಐಆರ್ ದಾಖಲು
ಥಾಣೆ, ಜೂ.27: ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿದ ಮೂವರು ತನಗೆ ಥಳಿಸಿದ್ದಾರೆ ಎಂದು ಥಾಣೆಯ ಟ್ಯಾಕ್ಸಿ ಚಾಲಕರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ.
ದ್ವಿಚಕ್ರ ವಾಹನಕ್ಕೆ ಸೈಡ್ ನೀಡಿಲ್ಲ ಎಂದು ಟ್ಯಾಕ್ಸಿ ಚಾಲಕ ಫೈಝಲ್ ಉಸ್ಮಾನ್ ಖಾನ್ (25) ಎಂಬಾತನಿಗೆ ಆರೋಪಿಗಳು ಥಳಿಸಿದ್ದರೆಂದು ಆರೋಪಿಸಲಾಗಿದೆ. ಘಟನೆ ಜೂನ್ 23ರಂದು ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ.
ತಾನು ಮುಂಬ್ರಾ ಪ್ರದೇಶದಲ್ಲಿದ್ದಾಗ ಕಾರು ಕೆಟ್ಟು ನಿಂತ ಕಾರಣ ಅದನ್ನು ಸ್ಟಾರ್ಟ್ ಮಾಡಲು ಯತ್ನಿಸಿದಾಗ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಆರೋಪಿಗಳು ಕಾರಣವಿಲ್ಲದೆ ತನಗೆ ಥಳಿಸಿದ್ದಾರೆ ಎಂದು ಸಂತ್ರಸ್ತ ದೂರಿದ್ದಾರೆ.
ಆರೋಪಿಗಳಾದ ಮಂಗೇಶ್ ಮುಂಡೆ, ಜಯದೀಪ್ ಮುಂಡೆ ಹಾಗೂ ಅನಿಲ್ ಸೂರ್ಯವಂಶಿ ವಿರುದ್ಧ ಐಪಿಸಿ ಸೆಕ್ಷನ್ 295ಎ, 392, 323, 504, 506 ಹಾಗೂ 34 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಜೂನ್ 23ರಂದು ಚಾಲಕ ಖಾನ್ ದಾಖಲಿಸಿದ್ದ ದೂರಿನಲ್ಲಿ ಆರೋಪಿಗಳು ತನಗೆ `ಜೈ ಶ್ರೀ ರಾಮ್' ಎಂದು ಹೇಳಲು ಬಲವಂತ ಪಡಿಸಿದ್ದರೆಂಬ ವಿಚಾರ ಹೇಳಿರಲಿಲ್ಲ. ಆದರೆ ಜೂನ್ 25ರಂದು ಪೊಲೀಸರ ಮುಂದೆ ಹೇಳಿಕೆ ನೀಡಿದ ಚಾಲಕ ತಾನು ಈ ಘಟನೆಯ ‘ಮತೀಯ ಬಣ್ಣದ ವಿಚಾರ’ವನ್ನು ಪೊಲೀಸರಿಂದ ಮಾತ್ರವಲ್ಲದೆ ತನ್ನ ಕುಟುಂಬ ಸದಸ್ಯರಿಂದಲೂ ಮುಚ್ಚಿಟ್ಟಿದ್ದಾಗಿ ಹೇಳಿದ್ದರು.