ಊಹೆಗೆ ತೆರೆಎಳೆದ ತೇಜಸ್ವಿ ಯಾದವ್: ಟ್ವಿಟರ್ನಲ್ಲಿ ಪ್ರತ್ಯಕ್ಷ
ಪಾಟ್ನ, ಜೂ.29: ಲೋಕಸಭಾ ಚುನಾವಣೆಯಲ್ಲಿ ಆರ್ಜೆಡಿ ಪಕ್ಷಕ್ಕೆ ಎದುರಾದ ಹೀನಾಯ ಸೋಲಿನ ಬಳಿಕ ಪಕ್ಷದ ಮುಖಂಡ, ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ನಾಪತ್ತೆಯಾಗಿದ್ದಾರೆ ಎಂಬ ಊಹಾಪೋಹ ಹಬ್ಬಿತ್ತು. ಇದೀಗ ಶನಿವಾರ ಟ್ವಿಟರ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸಿರುವ ತೇಜಸ್ವಿ, ತಾನು ಕಳೆದ ಕೆಲವು ವಾರ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ತೇಜಸ್ವಿ , ವಿಧಾನಸಭೆಯ ಮಳೆಗಾಳದ ಅಧಿವೇಶನದ ಮೊದಲ ದಿನ ಸದನದಲ್ಲಿ ಹಾಜರಿರಲಿಲ್ಲ. ಮಾಜಿ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ, ಪಕ್ಷದ ಸೋಲಿನ ಪರಾಮರ್ಶೆಗೆ ಮೇ 29ರಂದು ನಡೆದ ಸಭೆಯ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಟ್ವೀಟ್ ಮಾಡಿರುವ ಅವರು , ಸುದೀರ್ಘ ಕಾಲದಿಂದ ಬಾಧಿಸುತ್ತಿರುವ ಅಸ್ಥಿರಜ್ಜು ಗಾಯದ ನೋವಿಗೆ ಚಿಕಿತ್ಸೆ ಪಡೆಯುವಲ್ಲಿ ನಿರತನಾಗಿದ್ದೆ. ಆದರೆ ಸಾರ್ವಜನಿಕವಾಗಿ ನಾನು ಕಾಣಿಸಿಕೊಳ್ಳದ ಬಗ್ಗೆ ರಾಜಕೀಯ ವಿರೋಧಿಗಳು ಹಾಗೂ ಮಾಧ್ಯಮದ ವರ್ಗವೊಂದು ಹಲವು ಕತೆ ಕಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.