ಯಾರ ಮಗನಾದರೂ ಸರಿ, ಪಕ್ಷದಿಂದ ಉಚ್ಛಾಟಿಸಿ : ಪ್ರಧಾನಿ ಮೋದಿ
ಅಧಿಕಾರಿಗೆ ಕ್ರಿಕೆಟ್ ಬ್ಯಾಟ್ ನಿಂದ ಥಳಿಸಿದ ಕೈಲಾಶ್ ವಿಜಯ್ ವರ್ಗಿಯಾ ಪುತ್ರ
ಹೊಸದಿಲ್ಲಿ : ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯ್ವರ್ಗಿಯಾ ಅವರ ಪುತ್ರ ಹಾಗೂ ಇಂದೋರ್ ಶಾಸಕ ಆಕಾಶ್ ವಿಜಯ್ವರ್ಗಿಯಾ ಕಳೆದ ವಾರ ಮುನಿಸಿಪಲ್ ಅಧಿಕಾರಿಯೊಬ್ಬರಿಗೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಪ್ರಧಾನಿ ಇಂತಹ ಜನರು 'ಯಾರ ಮಗನಾದರೂ ಸರಿ' ಯಾವುದೇ ವಿನಾಯಿತಿಯಿಲ್ಲದ ಪಕ್ಷದಿಂದ ಉಚ್ಛಾಟಿಸಬೇಕೆಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯೊಂದರಲ್ಲಿ ಹೇಳಿದ್ದಾರೆಂದು ಪಕ್ಷದ ಕೆಲ ನಾಯಕರು ಬಹಿರಂಗಪಡಿಸಿದ್ದಾರೆ.
ಅಧಿಕಾರಿಗೆ ಹಲ್ಲೆಗೈದು ಬಂಧನಕ್ಕೊಳಗಾಗಿದ್ದ ಆಕಾಶ್ ವಿಜಯ್ವರ್ಗಿಯಾ ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
''ಪ್ರಧಾನಿ ಬಹಳಷ್ಟು ಅಸಮಾಧಾನಗೊಂಡಿದ್ದರು. ಯಾರಿಗೂ ದುರ್ವರ್ತನೆ ತೋರಲು ಅಥವಾ ಸಾರ್ವಜನಿಕವಾಗಿ ಅಹಂಕಾರ ತೋರ್ಪಡಿಸುವ ಅಧಿಕಾರವಿಲ್ಲ. ಅವರು ಘಟನೆಯನ್ನು ಬಲವಾಗಿ ಖಂಡಿಸಿ ಇಂತಹ ಕೃತ್ಯಗಳನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದರು'' ಎಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಬಿಜೆಪಿ ಸಂಸದೀಯ ಪಕ್ಷದ ಸಭೆಯ ನಂತರ ಹೇಳಿದರು.
ಆಕಾಶ್ ವಿಜಯ್ವರ್ಗಿಯಾ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದವರನ್ನೂ ಪಕ್ಷದಿಂದ ಉಚ್ಛಾಟಿಸಬೇಕೆಂದು ಪ್ರಧಾನಿ ಹೇಳಿದರೆಂದು ಮೂಲಗಳು ತಿಳಿಸಿವೆ.