ಭಾರತದಲ್ಲಿ ‘ಜೈ ಶ್ರೀರಾಂ’ ಹೇಳದ್ದಕ್ಕೆ ಥಳಿಸಿ ಹತ್ಯೆಗೈಯಲಾಗುತ್ತಿದೆ: ವಿಶ್ವಸಂಸ್ಥೆ ಆತಂಕ
ನ್ಯೂಯಾರ್ಕ್,ಜು.4: ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಜುಲೈ 1ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರ ವಿರುದ್ಧ ನಡೆಯುತ್ತಿರುವ ಗುಂಪು ಥಳಿತ ಮತ್ತು ಧ್ವೇಷಾಪರಾಧ ಪ್ರಕರಣಗಳ ಕುರಿತು ಪ್ರಸ್ತಾಪಿಸಲಾಗಿದೆ.
ಮಂಡಳಿಯ ಸಭೆಯಲ್ಲಿ ಗುಂಪು ಹತ್ಯೆಗೊಳಗಾದ 24ರ ಹರೆಯದ ತಬ್ರೇಝ್ ಅನ್ಸಾರಿ ಮತ್ತು ಕೋಲ್ಕತಾದ ಮದರಸ ಶಿಕ್ಷಕನ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಅನ್ಸಾರಿಯನ್ನು ಹಿಂದೂ ಮೂಲಭೂತವಾದಿಗಳು ಜಾರ್ಖಂಡ್ನ ಕರ್ಸವಾನ್ ಜಿಲ್ಲೆಯ ದಡ್ಕಿಡಿ ಗ್ರಾಮದಲ್ಲಿ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿದ್ದರೆ ಕೋಲ್ಕತಾದಲ್ಲಿ ರೈಲಿನಲ್ಲಿ ಪ್ರಯಾಣಿಸುವ ವೇಳೆ ಮದರಸ ಶಿಕ್ಷಕ ಜೈಶ್ರೀರಾಮ್ ಹೇಳದ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು.
ಸರಕಾರೇತರ ಸಂಸ್ಥೆ ಸೆಂಟರ್ ಆಫ್ ಆಫ್ರಿಕ ಡೆವಲಪ್ಮೆಂಟ್ ಆ್ಯಂಡ್ ಪ್ರೋಗ್ರೆಸ್ ಆಫ್ ಸೌತ್ ಆಫ್ರಿಕದ ಪ್ರತಿನಿಧಿ ಪೌಲ್ ನ್ಯೂಮನ್ ಕುಮಾರ್ ಸ್ಟನಿಲ್ಕವಸ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದೆ ನಡೆದ 41ನೇ ಸಾಮಾನ್ಯ ಅಧಿವೇಶನದ 17ನೇ ಸಭೆಯಲ್ಲಿ ಅವರು ಈ ಮಾತುಗಳನ್ನು ಉಲ್ಲೇಖಿಸಿದ್ದರು.
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರ ವಿರುದ್ಧದ ಧ್ವೇಷಾಪರಾಧಗಳಲ್ಲಿ ಗಮನಾರ್ಹ ಏರಿಕೆಯಾಗಿದೆ. ಮುಸ್ಲಿಮರು ತಮ್ಮ ಸಮುದಾಯದ ವಿರುದ್ಧ ದ್ವೇಷಾಪರಾಧ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದಾರೆ ಎಂದು ುಮಾರ್ ತಿಳಿಸಿದ್ದಾರೆ.
ಈ ದಾಳಿಗಳಿಂದ ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವ ಹೆಚ್ಚಾಗಿದೆ ಮತ್ತು ಧಾರ್ಮಿಕ ಉದ್ವಿಗ್ನತೆಗೆ ಕಾರಣವಾಗಿದೆ. ಇದರಲ್ಲಿ ಇತ್ತೀಚಿನ ಬೆಳವಣಿಗೆಯೇ ಮುಸ್ಲಿಮರು ಜೈಶ್ರೀರಾಮ್ ಎಂದು ಹೇಳಲು ಒತ್ತಾಯಪಡಿಸುವುದಾಗಿದೆ. ಹತ್ತು ದಿನಗಳ ಹಿಂದೆ 24ರ ಹರೆಯದ ತಬ್ರೇಝ್ ಅನ್ಸಾರಿಯನ್ನು ಜೈಶ್ರೀರಾಮ ಎಂದು ಹೇಳದ ಕಾರಣಕ್ಕೆ ಹಿಂದೂಗಳ ಗುಂಪು ಥಳಿಸಿ ಹತ್ಯೆ ನಡೆಸಿತ್ತು. ಇತ್ತೀಚೆಗೆ ಕೋಲ್ಕತಾದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮದರಸ ಶಿಕ್ಷಕರೊಬ್ಬರು ಜೈಶ್ರೀರಾಮ್ ಎಂದು ಹೇಳದ ಕಾರಣಕ್ಕೆ ಅವರಿಗೆ ಹಲ್ಲೆ ನಡೆಸಲಾಗಿತ್ತು ಎಂದು ಕುಮಾರ್ ಸಭೆಗೆ ತಿಳಿಸಿದ್ದಾರೆ.