ಬಿಜೆಪಿ ಶಾಸಕ ವಿಜಯವರ್ಗೀಯರ ವಿವಾದದ ಕೇಂದ್ರವಾಗಿದ್ದ ಮನೆ ನೆಲಸಮ
ಇಂದೋರ್, ಜು. 5: ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಸರಕಾರಿ ಅಧಿಕಾರಿಗೆ ಬ್ಯಾಟ್ನಿಂದ ಥಳಿಸಿದ ಬಳಿಕ ಸುದ್ದಿಯಾಗಿದ್ದ ನಗರದ ಗಾಂಜಿ ಕಂಪೌಂಡ್ ಪ್ರದೇಶದಲ್ಲಿರುವ ಶಿಥಿಲಗೊಂಡ ಮನೆಯನ್ನು ನಗರಾಡಳಿತ ಶುಕ್ರವಾರ ಧ್ವಂಸಗೊಳಿಸಿದೆ.
ಜೂನ್ 26ರಂದು ಒತ್ತುವರಿ ವಿರೋಧಿ ತಂಡ ಈ ಮನೆ ಧ್ವಂಸಗೊಳಿಸಲು ಮುಂದಾದಾಗ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಹಾಗೂ ಅವರ ಬೆಂಬಲಿಗರು ಸರಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿತ್ತು.
ಕೆಡವುದಕ್ಕೆ ನಿಷೇಧ ಕೋರಿ ಸಲ್ಲಿಸಲಾದ ಮನವಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಬಳಿಕ ನಗರಾಡಳಿತ ಮೂರು ದಿನಗಳ ಕಾರ್ಯಾಚರಣೆ ನಡೆಸಿ ಈ ಎರಡು ಮಹಡಿಯ ಕಟ್ಟಡವನ್ನು ಧ್ವಂಸಗೊಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂದೋರ್ ನಗರಾಡಳಿತ ಆಯುಕ್ತ ಆಶಿಸ್ ಸಿಂಗ್, ಗಾಂಜಿ ಕಂಪೌಂಡ್ನಲ್ಲಿರುವ ಶಿಥಿಲಗೊಂಡಿದ್ದ ಈ ಮನೆಯನ್ನು ಅರ್ತ್ಮೂವರ್ನ ಸಹಾಯದಿಂದ ನೆಲಸಮಗೊಳಿಸಲಾಗಿದೆ. ಈ ಕಟ್ಟಡ ಹಳೆಯದ್ದು ಹಾಗೂ ಶಿಥಿಲಗೊಂಡಿತ್ತು ಎಂದಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾರ್ಯಾಚರಣೆ ಸಂದರ್ಭ ಸುಮಾರು 200 ನಾಗರಿಕ ಸಿಬ್ಬಂದಿ ಇದ್ದರು. ಹನಿ ಮಳೆ ಬೀಳುತ್ತಿರುವ ನಡುವೆ ಕಟ್ಟಡವನ್ನು ಧ್ವಂಸಗೊಳಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಈ ಮನೆ ದಶಕಗಳಷ್ಟು ಹಳೆಯದಾದುದರಿಂದ ಕೆಡವುವ ನಿರ್ಧಾರ ತೆಗೆದುಕೊಳ್ಳಲಾಯಿತು. ಕುಸಿಯುವ ಭೀತಿಯನ್ನು ಈ ಮನೆ ಪರಿಸರದ ನಿವಾಸಿಗಳಲ್ಲಿ ಮೂಡಿಸಿತ್ತು ಎಂದು ಸಿಂಗ್ ಹೇಳಿದ್ದಾರೆ.
ಉಚ್ಚ ನ್ಯಾಯಾಲಯದ ಇಂದೋರ್ ಪೀಠದ ನಿರ್ದೇಶನದಂತೆ ಸಂತ್ರಸ್ತ ಕುಟುಂಬಗಳಿಗೆ ಭುರಿ ತೆಕ್ರಿ ಪ್ರದೇಶದಲ್ಲಿರುವ ಬಹುಮಹಡಿಯ ಕಟ್ಟಡದಲ್ಲಿ ಫ್ಲಾಟ್ ಒದಗಿಸಲಾಗುವುದು. ಅಲ್ಲಿ ಅವರು ಮೂರು ತಿಂಗಳುಗಳ ಕಾಲ ವಾಸಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮನೆ ಧ್ವಂಸಗೊಳಿಸುವ ನಗರಾಡಳಿತದ ನಿರ್ಧಾರ ವಿರೋಧಿಸಿ ಅದರಲ್ಲಿ ವಾಸಿಸುತ್ತಿದ್ದ ಶ್ರೀವಂಶ ಅವರ ಕುಟುಂಬದ ಸದಸ್ಯರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಉಚ್ಚ ನ್ಯಾಯಾಲಯ ಅವರ ಮನವಿ ತಿರಸ್ಕರಿಸಿತ್ತು.
ಕುಟುಂಬಕ್ಕೆ ಎರಡು ದಿನಗಳ ಕಾಲ ಪರ್ಯಾಯ ವಸತಿ ನೀಡುವಂತೆ ಉಚ್ಚ ನ್ಯಾಯಾಲಯ ನಗರಾಡಳಿತಕ್ಕೆ ಸೂಚಿಸಿದೆ.