ವಿದೇಶಕ್ಕೆ ಹಾರಬೇಕೇ, 18,000 ಕೋ.ರೂ. ಠೇವಣಿ ಇಡಿ: ನರೇಶ್ ಗೋಯಲ್ಗೆ ನ್ಯಾಯಾಲಯ ಸೂಚನೆ
ಹೊಸದಿಲ್ಲಿ, ಜು.9: ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಜೆಟ್ ಏರ್ವೇಸ್ ಸ್ಥಾಪಕ ನರೇಶ್ ಗೋಯಲ್ ಅವರ ಮನವಿಯನ್ನು ಮಂಗಳವಾರ ತಳ್ಳಿ ಹಾಕಿರುವ ದಿಲ್ಲಿ ಉಚ್ಚ ನ್ಯಾಯಾಲಯ, ಹಾಗೊಂದು ವೇಳೆ ವಿದೇಶಕ್ಕೆ ತೆರಳಲೇಬೇಕೆಂದಿದ್ದಲ್ಲಿ ನ್ಯಾಯಾಲಯದಲ್ಲಿ 18,000 ಕೋ.ರೂ. ಠೇವಣಿಯಿಟ್ಟು ತೆರಳಬಹುದು ಎಂದು ತಿಳಿಸಿದೆ.
ಇದೇ ವೇಳೆ ತನ್ನ ವಿರುದ್ಧ ಹೊರಡಿಸಿರುವ ಲುಕೌಟ್ ನೋಟಿಸ್ ಹೊರಡಿಸಿರುವುದನ್ನು ಪ್ರಶ್ನಿಸಿರುವ ಅವರ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಬರುವ ಗಂಭೀರ ವಂಚನೆ ತನಿಖಾ ಕಚೇರಿ ಗೋಯಲ್ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿತ್ತು. ಜುಲೈ 10ರಂದು ತನ್ನ ಮುಂದೆ ಹಾಜರಾಗುವಂತೆ ತನಿಖಾ ಸಂಸ್ಥೆ ಗೋಯಲ್ ಅವರಿಗೆ ಸೂಚಿಸಿತ್ತು. ಜೆಟ್ ಏರ್ವೇಸ್ನಲ್ಲಿ ಬೃಹತ್ ಪ್ರಮಾಣದ ಅವ್ಯವಹಾರ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗೋಯಲ್ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು. ಸಾಲದ ಸುಳಿಯಲ್ಲಿ ಸಿಲುಕಿದ್ದ ಜೆಟ್ ಏರ್ವೇಸ್ಗೆ ಗೋಯಲ್ ಹಾಗೂ ಅವರ ಪತ್ನಿ ಮಾರ್ಚ್ನಲ್ಲಿ ರಾಜೀನಾಮೆ ನೀಡಿದ್ದರು. ವೈಮಾನಿಕ ಸಂಸ್ಥೆಯು ಎಪ್ರಿಲ್ನಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ರಾಜೀನಾಮೆ ನೀಡುವ ಸಮಯದಲ್ಲಿ ಗೋಯಲ್ ಜೆಟ್ ಏರ್ವೇಸ್ನ ಮುಖ್ಯಸ್ಥ ಮತ್ತು ಮಂಡಳಿ ಸದಸ್ಯರಾಗಿದ್ದರೆ ಅವರ ಪತ್ನಿ ಅನಿತಾ ಗೋಯಲ್ ಮಂಡಳಿ ಸದಸ್ಯೆಯಾಗಿದ್ದರು.