ತಮಿಳು ಹೋರಾಟಗಾರನ ವಿರುದ್ಧ ಎಫ್ಐಆರ್ ರದ್ದುಗೊಳಿಸಲು ನ್ಯಾಯಾಲಯ ನಿರಾಕರಣೆ
ಚೆನ್ನೈ,ಜು.9: ದ್ವೇಷ ಭಾಷಣದ ಆರೋಪದಲ್ಲಿ ತನ್ನ ವಿರುದ್ಧ ದಾಖಲಿಸಲಾಗಿರುವ ಎಫ್ಐಆರನ್ನು ರದ್ದುಗೊಳಿಸುವಂತೆ ಕೋರಿ ತಮಿಳುಪರ ಹೋರಾಟಗಾರ ತಿರುಮುರುಗನ್ ಗಾಂಧಿ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿರುವ ಮದ್ರಾಸ್ ಉಚ್ಚ ನ್ಯಾಯಾಲಯ ವಾಕ್ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ಇಂತಹ ಹೇಳಿಕೆಗಳನ್ನು ನೀಡಲು ಸಂವಿಧಾನ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ.
ಮನವಿದಾರರು ಮಾಡಿರುವ ಭಾಷಣಗಳಿಂದ ಖಂಡಿತವಾಗಿಯೂ ವಿಭಿನ್ನ ಧಾರ್ಮಿಕ ಗುಂಪುಗಳು ಮತ್ತು ಸಮುದಾಯಗಳ ನಡುವೆ ದ್ವೇಷ, ಶತ್ರುತ್ವ ಮತ್ತು ಕೆಟ್ಟ ಭಾವನೆಯನ್ನು ಉತ್ತೇಜಿಸುತ್ತದೆ ಎಂದು ನ್ಯಾಯಾಧೀಶ ಅನಂದ ವೆಂಕಟೇಶ್ ತಿಳಿಸಿದ್ದಾರೆ.
ಈ ಭಾಷಣಗಳಲ್ಲಿ ಪ್ರತ್ಯೇಕತೆ ಮತ್ತು ವಿಭಜಕ ಯೋಚನೆಯ ಛಾಯೆಯೂ ಕಾಣುತ್ತಿದ್ದು ಇದರಿಂದ ರಾಷ್ಟ್ರದ ಏಕತೆಗೆ ಮತ್ತು ತಮಿಳುನಾಡಿನ ಅಭಿವೃದ್ಧಿ ಮತ್ತು ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.
ಇದರ ಹಿಂದೆ ದೊಡ್ಡ ಜಾಲವೇ ಇದೆಯೇ ಮತ್ತು ಮನವಿದಾರರು ಕೇವಲ ಅದರ ಮುಖವೇ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಮೇ 17 ಸಂಘ ಎಂಬ ಸಂಘಟನೆಯ ಸ್ಥಾಪಕರಾಗಿರುವ ತಿರುಮುರುಗನ್ ಗಾಂಧಿ ವಿರುದ್ಧ ಈ ಹಿಂದೆಯೂ ಅವರು ಕೇಂದ್ರ ಮತ್ತು ತಮಿಳುನಾಡು ಸರಕಾರದ ವಿರುದ್ಧ ನೀಡಿರುವ ಹೇಳಿಕೆಗಾಗಿ ಪ್ರಕರಣ ದಾಖಲಿಸಲಾಗಿದೆ.