ಅತೃಪ್ತರ ಭೇಟಿಗೆ ತೆರಳಿದ ಡಿಕೆಶಿಗೆ ಮುಂಬೈ ಪೊಲೀಸರಿಂದ ತಡೆ
ಮುಂಬೈ, ಜು.10: ಅತೃಪ್ತ ಶಾಸಕರನ್ನು ಭೇಟಿಯಾಗಲು ಮುಂಬೈಗೆ ತೆರಳಿದ ಸಚಿವರಾದ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಸಚಿವರ ತಂಡವನ್ನು ಮುಂಬೈ ಪೊಲೀಸರು ತಡೆದಿದ್ದಾರೆ.
ಮುಂಬೈನ ರಿನೈಸೆನ್ಸ್ ಹೋಟೆಲ್ನಲ್ಲಿರುವ ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಶಾಸಕರನ್ನು ಭೇಟಿಯಾಗಿ ಮನವೊಲಿಸುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ ಹಾಗೂ ಶಾಸಕ ಶಿವಲಿಂಗೇಗೌಡ ನೇತೃತ್ವದ ತಂಡ ಇಂದು ಮುಂಜಾನೆ ಮುಂಬೈಗೆ ತೆರಳಿದೆ. ಆದರೆ ಹೋಟೆಲ್ ಮುಂಭಾಗದಲ್ಲೇ ಇವರನ್ನು ಪೊಲೀಸರು ತಡೆದಿದ್ದಾರೆ.
ಕರ್ನಾಟಕದಿಂದ ಬರುವ ಸಚಿವರನ್ನು ಭೇಟಿಯಾಗಲು ತಮಗೆ ಇಷ್ಟವಿಲ್ಲ. ಆದ್ದರಿಂದ ತಮಗೆ ಭದ್ರತೆ ಕಲ್ಪಿಸುವಂತೆ ಅತೃಪ್ತರು ಶಾಸಕರು ಮುಂಬೈ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಡಿಕೆಶಿಯವರನ್ನು ಪೊಲೀಸರು ತಡೆದಿದ್ದಾರೆ.
ಸುಮಾರು ಒಂದು ಗಂಟೆಯಿಂದ ಹೋಟೆಲ್ ಎದುರು ಡಿಕೆಶಿ ಕಾಯುತ್ತಿದ್ದರೂ ಪೊಲೀಸರು ಹೊಟೇಲ್ ಒಳಗೆ ಪ್ರವೇಶಿಸಲು ಅವರಿಗೆ ಅವಕಾಶ ನೀಡಿಲ್ಲ. ಈ ನಡುವೆಯೇ ಅತೃಪ್ತ ಶಾಸಕರು ರಿನೈಸೆನ್ಸ್ ಹೋಟೆಲ್ನಿಂದ ಬೇರೇಡೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದ್ದಾರೆ. ಹೋಟೆಲ್ನ ಹಿಂಬಾಗಿಲ ಮೂಲಕ ಹೋಟೆಲ್ನಿಂದ ಬೇರೇಡೆ ಶಿಫ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.