ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಕಡಿವಾಣ ಬಿದ್ದಿದೆಯೇ?
ಶ್ರೀನಗರ, ಜು.10: ಕಳೆದ ವರ್ಷಕ್ಕೆ ಹೋಲಿಸಿದರೆ 2019ರ ಮೊದಲಾರ್ಧದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿನ ಒಳನುಸುಳುವಿಕೆ ಶೇಕಡ 43ರಷ್ಟು ಕಡಿಮೆಯಾಗಿದೆ. ಭಯೋತ್ಪಾದಕ ಕೃತ್ಯಗಳು ಶೇಕಡ 28ರಷ್ಟು ಇಳಿಕೆಯಾಗಿದ್ದರೆ, ಸ್ಥಳೀಯವಾಗಿ ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವುದು ಶೇಕಡ 40ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಬಾಲಾಕೋಟ್ ಸರ್ಜಿಕಲ್ ದಾಳಿ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, "ಭದ್ರತಾ ಪಡೆಗಳ ಪ್ರಬಲ ಹಾಗೂ ನಿರಂತರ ಪ್ರಯತ್ನದಿಂದಾಗಿ, ರಾಜ್ಯದಲ್ಲಿ ಭದ್ರತಾ ಸ್ಥಿತಿ ಸುಧಾರಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಗಡಿಯಾಚೆಯ ಒಳನುಸುಳುವಿಕೆ ಶೇಕಡ 43ರಷ್ಟು ಕಡಿಮೆಯಾಗಿದೆ" ಎಂದು ವಿವರಿಸಿದರು.
ಆದರೆ ಬಾಲಕೋಟ್ ದಾಳಿ ಮತ್ತು ಒಳನುಸುಳುವಿಕೆ ತಡೆಗೆ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಲಿಲ್ಲ. ಆದರೆ ಗುಪ್ತಚರ ವಿಭಾಗದ ಮಾಹಿತಿಯ ಪ್ರಕಾರ, ಬಾಲಾಕೋಟ್ ದಾಳಿ ಬಳಿಕ ಪಾಕಿಸ್ತಾನದ ಉಗ್ರ ಶಿಬಿರಗಳು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಅಫ್ಘಾನಿಸ್ತಾನದ ಪಶ್ಚಿಮ ಗಡಿಗೆ ಸ್ಥಳಾಂತರಗೊಂಡಿದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಅಮೆರಿಕ, ಉಗ್ರರನ್ನು ಪತ್ತೆ ಮಾಡಿ ನಿರ್ಮೂಲನೆ ಮಾಡಲು ಡ್ರೋನ್ ಗಳನ್ನು ನಿಯೋಜಿಸಿದೆ.