ರೈಲ್ವೆ ಖಾಸಗೀಕರಣದ ಪ್ರಸ್ತಾವವಿಲ್ಲ: ಪಿಯೂಷ್ ಗೋಯಲ್
ಹೊಸದಿಲ್ಲಿ, ಜು.10: ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವವಿಲ್ಲ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಖಾಸಗಿಯವರಿಗೆ ಎರಡು ರೈಲುಗಳ ಓಡಾಟಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ ಎಂಬ ವರದಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದುವರೆಗೆ ಇಂತಹ ಪ್ರಸ್ತಾವ ಬಂದಿಲ್ಲ ಎಂದು ತಿಳಿಸಿದರು.
ಆದರೆ ಮೂಲಗಳ ಪ್ರಕಾರ, ಹೊಸದಿಲ್ಲಿ-ಲಕ್ನೋ ತೇಜಸ್ ಎಕ್ಸ್ಪ್ರೆಸ್ ರೈಲನ್ನು ಖಾಸಗಿಯವರಿಗೆ ವಹಿಸಿಕೊಡಲು ಗುರುತಿಸಲಾಗಿದೆ. ಮತ್ತೊಂದು ಪ್ರತ್ಯೇಕ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೋಯಲ್, ಈ ವರ್ಷದ ಎಪ್ರಿಲ್ವರೆಗೆ 21,443 ಕಿ.ಮೀ. ವ್ಯಾಪ್ತಿಯ 189 ಹೊಸ ರೈಲು ಮಾರ್ಗಗಳನ್ನು ಆರಂಭಿಸಿ ಇದುವರೆಗೆ ರೈಲ್ವೇ ನೆಟ್ವರ್ಕ್ ವ್ಯಾಪ್ತಿಯಲ್ಲಿರದ ಪ್ರದೇಶಗಳನ್ನೂ ರೈಲ್ವೇ ವಲಯಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಯೋಜನೆ, ಅನುಮೋದನೆ, ಅನುಷ್ಟಾನ ಹಂತದಲ್ಲಿದೆ ಎಂದು ಸಚಿವರು ಇದೇ ವೇಳೆ, ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೇ ಇಲಾಖೆಯ ಸಹಾಯಕ ಸಚಿವ ಸುರೇಶ್ ಅಂಗಡಿ, ಖಾಸಗಿಯವರಿಗೆ ವಹಿಸುವ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನದಲ್ಲಿ ಪರೀಕ್ಷಾರ್ಥ ಓಡಾಟ ನಡೆಸಲಾಗುವುದು ಎಂದಿದ್ದಾರೆ.