ಸುಪ್ರೀಂನಲ್ಲಿ ಅತೃಪ್ತ ಶಾಸಕರ ಅರ್ಜಿಯ ವಿಚಾರಣೆ ಪುನಾರಾರಂಭ
ಹೊಸದಿಲ್ಲಿ, ಜು.12: ಅತೃಪ್ತ ಶಾಸಕರು ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬ ಮಾಡಿದ್ದಾರೆಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪುನರಾರಂಭಗೊಂಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದಲ್ಲಿ ನಡೆಯುತ್ತಿರುವ ಅರ್ಜಿ ವಿಚಾರಣೆಯ ವೇಳೆ ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ಅವರಿಂದ ವಾದ ಮಂಡಿಸಿದರು. ರೋಹ್ಟಗಿ ವಾದಕ್ಕೆ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು.
ಅತೃಪ್ತ ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ ಈ ಬಗ್ಗೆ ವಿಡಿಯೋ ಚಿತ್ರೀಕರಣ ಕೂಡ ಇದೆ. ಅತೃಪ್ತ ಶಾಸಕರಿಗೆ ವಿಪ್ ನೀಡಲಾಗಿದೆ . ಸ್ಪೀಕರ್ ನಡೆಯಿಂದ ಶಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರ ರಾಜೀನಾಮೆ ಅಂಗೀಕರಿಸದಿದ್ದರೆ ನ್ಯಾಯಾಂಗ ನಿಂದನೆ ಆಗುತ್ತದೆ. ಅತೃಪ್ತರ ಪರ ವಕೀಲ ರೋಹ್ಟಗಿ ವಾದ ಮಂಡಿಸಿದರು .
ಅತೃಪ್ತ ಶಾಸಕರ ಪರ ವಕೀಲ ರೋಹ್ಟಗಿ ಅವರು ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿದಾಗ ಇದಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್ ಪರ ವಕೀಲ ಸಿಂಘ್ವಿ “ ರಾಜೀನಾಮೆ ಅಂಗೀಕರಿಸುವುದಿಲವೆಂದು ಅವರು ಹೇಳಿಲ್ಲ ಕಾಲಾವಕಾಶ ಕೇಳಿದ್ದಾರೆ ಅಷ್ಟೇ. ಶಾಸಕರ ವರ್ತನೆ ಅನುಮಾನಾಸ್ಪದವಾಗಿವೆ. ತಮಗೆ ಮನವರಿಕೆಯಾಗುವರೆಗೆ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ '' ಎಂದಾಗ ಸ್ಪೀಕರ್ ಸುಪ್ರೀಂ ಕೋರ್ಟ್ ನ ಅಧಿಕಾರವನ್ನು ಪ್ರಶ್ನಿಸುತ್ತಿದ್ದಾರಾ ? ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರಶ್ನಿಸಿದರು.
ಸಿಎಂ ಪರ ವಾದ ಮಂಡಿಸಿದ ರಾಜೀವ್ ಧವನ್ ಸಿಎಂ ಕುಮಾರಸ್ವಾಮಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಇದೆ. ಸರಕಾರ ಅಲ್ಪಮತಕ್ಕೆ ಕುಸಿಯಲೆಂದು ಶಾಸಕರು ರಾಜೀನಾಮೆ ನೀಡಿದ್ದಾರೆ. ಕೋರ್ಟ್ ಏನು ಮಾಡಬೇಕೆಂದು ಶಾಸಕರು ಬಯಸಿದ್ದಾರೆ. ಯಾವ ಆಧಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡುವಂತೆ ಅವರು ಕೇಳಿದ್ದಾರೆ. ಈ ವಿಚಾರದಲ್ಲಿ ರಾಜ್ಯಪಾಲರಿಗೆ ಯಾವುದೇ ಅಧಿಕಾರ ಇಲ್ಲ ಎಂದರು.