ರಾಜ್ಯಪಾಲರ ವಿರುದ್ಧ ‘ನಕ್ಕೀರನ್’ ವರದಿ: ಮದ್ರಾಸ್ ಹೈಕೋರ್ಟ್ ಕಲಾಪಕ್ಕೆ ಸುಪ್ರೀಂ ಕೋರ್ಟ್ ತಡೆ
ಹೊಸದಿಲ್ಲಿ, ಜು. 12: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಅಗೌರವಿಸುವ ಲೇಖನ ಪ್ರಕಟಿಸಿದ ತಮಿಳು ಮ್ಯಾಗಝಿನ್ ‘ನಕ್ಕೀರನ್’ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಮತ್ತಷ್ಟು ಕಲಾಪಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ತಮಿಳುನಾಡು ವಿರುದ್ಧುನಗರ್ನಲ್ಲಿರುವ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ನಿರ್ಮಲಾ ದೇವಿ ಹಾಗೂ ರಾಜ್ಯಪಾಲರು, ರಾಜಭವನದ ಅಧಿಕಾರಿಗಳೊಂದಿಗೆ ನಂಟು ಇದೆ ಎಂದು ಆರೋಪಿಸಿದ ವರದಿ ಮ್ಯಾಗಝಿನ್ ನಲ್ಲಿ ಪ್ರಕಟವಾಗಿತ್ತು. ಕಾಲೇಜು ಯುವತಿಯರನ್ನು ಸಾಗಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಎಪ್ರಿಲ್ನಲ್ಲಿ ನಿರ್ಮಲಾ ದೇವಿಯನ್ನು ಬಂಧಿಸಲಾಗಿತ್ತು. ನಕ್ಕೀರನ್ ಗೋಪಾಲನ್ ಎಂದು ಜನಪ್ರಿಯರಾಗಿರುವ ಮ್ಯಾಗಝಿನ್ನ ಸಂಪಾದಕ ಆರ್. ರಾಜಗೋಪಾಲ್ ಅವರ ವಿರುದ್ಧ ಕಲಾಪಕ್ಕೆ ಮದ್ರಾಸ್ ಹೈಕೋರ್ಟ್ ನೀಡಿದ ತಡೆ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ ಮನವಿಯನ್ನು ಪರಿಶೀಲನೆ ನಡೆಸುವುದಕ್ಕೆ ನ್ಯಾಯಮೂರ್ತಿ ಎಸ್.ಎ. ನಝೀರ್ ಶುಕ್ರವಾರ ಒಪ್ಪಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಹೈಕೋರ್ಟ್ ಜೂನ್ 4ರಂದು ತಡೆ ನೀಡಿ ರಾಜಗೋಪಾಲ್ಗೆ ಮಧ್ಯಂತರ ಬಿಡುಗಡೆ ನೀಡಿತ್ತು.