ಅಯೋಧ್ಯೆಯನ್ನು ಸಾಂಸ್ಕೃತಿಕ ಸ್ಮಾರ್ಟ್ ಸಿಟಿಯನ್ನಾಗಿಸಿ: ಮಧ್ಯಸ್ಥಿಕೆ ತಂಡದ ಪ್ರಸ್ತಾಪ
ಹೊಸದಿಲ್ಲಿ, ಜು. 13: ರಾಮಜನ್ಮ ಭೂಮಿ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಲು ನ್ಯಾಯಾಲಯ ನೇಮಕ ಮಾಡಿದ ಮಧ್ಯಸ್ಥಿಕೆ ತಂಡ ಕೊನೆಗೂ ಹಲವು ಬಾರಿ ಸಭೆ ನಡೆಸಿದೆ. ಈ ಸಭೆಯಲ್ಲಿ ವಿವಾದಿತ ವಿಷಯದ ಬಗ್ಗೆ ನಡೆಸಿರುವ ಮಾತುಕತೆ ಹಾಗೂ ಪ್ರಗತಿಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಈ ಸಭೆಯ ವರದಿಯನ್ನು ಜುಲೈ 18ರಂದು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಸ್ಥಿಕೆ ತಂಡಕ್ಕೆ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ಸಂಪೂರ್ಣ ಅಯೋಧ್ಯೆ ನಗರವನ್ನು ರಾಷ್ಟ್ರೀಯ ಸಾಂಸ್ಕೃತಿಕ ಸ್ಮಾಟ್ ಸಿಟಿ ಎಂದು ಘೋಷಿಸಬೇಕು. ಅದರ ಆರ್ಥಿಕ ಹಾಗೂ ವ್ಯವಸ್ಥಾಪನೆಯ ಹೊಣೆಯನ್ನು ಕೇಂದ್ರ ಸರಕಾರಕ್ಕೆ ವಹಿಸಬೇಕು. ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರ ಇರಬಾರದು ಎಂಬ ಸಲಹೆಗಳು ಸಾರ್ವತ್ರಿಕವಾಗಿ ಕೇಳಿ ಬಂದಿದೆ.
ಅಯೋಧ್ಯೆ ಸ್ಮಾರ್ಟ್ ಸಿಟಿಯನ್ನು ನಿರ್ವಹಿಸಲು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕೇಂದ್ರ ಸರಕಾರ ಇಲಾಖೆಯೊಂದನ್ನು ರೂಪಿಸಬೇಕು. ಸ್ಮಾರ್ಟ್ ಸಿಟಿ ಯೋಜನೆಯನ್ನು ದೇಶ ಹಾಗೂ ವಿದೇಶದ ಉತ್ತಮ ನಗರ ಯೋಜನೆಗಾರರು ಹಾಗೂ ವಾಸ್ತುಶಿಲ್ಪಿಗಳು ಮೇಲ್ವಿಚಾರಣೆ ನಡೆಸಬೇಕು.
ವಿಸ್ತಾರ ಪ್ರದೇಶವನ್ನು ಪಾರ್ಕ್, ಕೆರೆಗಳು, ವಸ್ತು ಸಂಗ್ರಹಾಲಯ, ಲೈಬ್ರೆರಿ, ಆಟದ ಮೈದಾನ, ಸಂದರ್ಶಕರ ಕೇಂದ್ರ ಹಾಗೂ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ನಿರ್ಮಿಸುವ ಮೂಲಕ ಚೆಂದಗೊಳಿಸಬೇಕು ಮೊದಲಾದ ಸಲಹೆಗಳು ಕೇಳಿ ಬಂದಿದೆ.